Baidashree

Shree Brahma Baidarkala Garodi, Marali – Nalkuru

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಮಾರಾಳಿ - ನಾಲ್ಕೂರು

ಉಡುಪಿಯಿಂದ ಕೊಕ್ಕರ್ಣೆ ತಲುಪಿ ಕೊಕ್ಕರ್ಣೆ ಬಸ್ ನಿಲ್ದಾಣದಿಂದ ಕೊಕ್ಕರ್ಣೆ ಮಂದಾರ್ತಿ ರಸ್ತೆಯಲ್ಲಿ ಸುಮಾರು 5ಕಿ.ಮೀ. ದೂರದಲ್ಲಿ ಎಡಕ್ಕೆ ಕೊಕ್ಕರ್ಣೆ – ಮದ್ದೂರು ರಸ್ತೆಗೆ ತಿರುಗಿ ಸುಮಾರು 4.5ಕಿ.ಮೀ. ಸಾಗಿದರೆ ಮಾರಾಳಿ ಮಹಾಗಣಪತಿ ದೇವಸ್ಥಾನದ ಹತ್ತಿರ ಈ ಗರೋಡಿ ಇದೆ.
ಗರೋಡಿಯ ಮುಖ್ಯ ದ್ವಾರವು ಬಡಗು ಮುಖವಾಗಿದ್ದು ಬ್ರಹ್ಮಗುಡಿಯು ಪೂವಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗ ಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಗಿಂಡೆಯಲ್ಲಿ ನೀರಿಟ್ಟು ಆರಾಧನೆಯಿದೆ.
ಗುಂಡದ ಬಲಬದಿಯಲ್ಲಿ ಕೋಟಿಚೆನ್ನಯರ ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಯಿದೆ. ಪಕ್ಕದಲ್ಲಿ ದೇಯಿಬೈದೆತಿ ಮಣೆಮಂಚವಿದೆ. ಗುಂಡದ ಎಡಭಾಗದಲ್ಲಿ ಕುಜುಂಬ ಕಾಂಜವರ ಹಾಗೂ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಜೋಗಿಪುರುಷ ಮರದ ಮೂರ್ತಿಯಿದೆ.
ಮೈಂದಾಳ್ತಿ, ಮಗು, ತೊಟ್ಟಿಲು, ಚಿಕ್ಕಮ್ಮನ ಮರದ ಮೂರ್ತಿಗಳಿವೆ, ಹಾಗೂ ಜುಮಾದಿಯ ಮಣೆಮಂಚವಿದೆ.
ಗರೋಡಿಯ ಹೊರಗೆ ಜಗಲಿಯಲ್ಲಿ ಬಾಗಿಲ ಬೊಬ್ಬರ್ಯನ ಮರದ ಮೂರ್ತಿಯಿದೆ. ಗರೋಡಿಯ ಆವರಣದಲ್ಲಿ ತುಳಸೀಕಟ್ಟೆ ಹಾಗೂ ಬಲಿಕಲ್ಲುಗಳಿವೆ.
ಗರೋಡಿಯ ಎದುರು ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿಗಳಿವೆ.
ಗರೋಡಿಯ ಪರಿಸರದಲ್ಲಿ ರಾವುತರ ಗುಡಿ ಹಾಗೂ ದುರ್ಗಾಪರಮೇಶ್ವರಿ ದೇವಸ್ಥಾನಗಳಿವೆ.

ಕೃಷ್ಣ ಪೂಜಾರಿ

2004 ರಿಂದ ಕೃಷ್ಣ ಪೂಜಾರಿ (40 ವರ್ಷ ಪ್ರಾಯ) ಇವರು ಈ ಗರೋಡಿಯ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಹಿರಿಯರಾದ ಬಾಬು ಪೂಜಾರಿ, ಬೋಳು ಪೂಜಾರಿ, ಚೆನ್ನ ಪೂಜಾರಿ ಇವರು ಈ ಗರೋಡಿಯ ಅರ್ಚಕರಾಗಿ ಸೇವೆ ಮಾಡಿದ್ದರು.
ಈ ಗರೋಡಿಯಲ್ಲಿ ದರ್ಶನಕ್ಕೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಚೆನ್ನು ಪೂಜಾರಿ, ನಾರಾಯಣ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ವಿಠಲ ಶೆಟ್ಟಿ ಇವರು ಈ ಗರೋಡಿಯ ಮೊಕ್ತೇಸರರು. (ಮೊಬೈಲ್: 990221148)
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ(ಪೆರ್ಡೂರು), ಚೌತಿ ಪೂಜೆ, ಅಷ್ಟಮಿ ಪೂಜೆ, ಕದಿರು ಕಟ್ಟುವುದು, ಡಿಸೆಂಬರ್ ತಿಂಗಳಲ್ಲಿ ಅಗೆಲ್ ಸೇವೆ, ಹಾಲು ಹಬ್ಬ, ಚಿಕ್ಕಮ್ಮದೇವಿಗೆ ಗೆಂಡ ಸೇವೆ ನಡೆಯುವುದು. ಪ್ರತೀ ವರ್ಷ ಮಾರ್ಚ ತಿಂಗಳ 25ನೇ ತಾರೀಖಿಗೆ ಬೈದೇರುಗಳ ನೇಮ, ಶಿವರಾಯ ಕೋಲ, ಮಾಯಂದಾಳ್ತಿ ಕೋಲ ನಡೆಯುತ್ತದೆ.
ನಾಲ್ಕೂರು, ಕಜ್ಕೆ, ಮಿಯಾರು, ಮಾರಾಳಿಯ ಜನರು ಈ ಗರೋಡಿಯ ಕೂಡು ಕಟ್ಟಿಗೆ ಸೇರಿದವರಾಗಿದ್ದು, ಗರೋಡಿಯಲ್ಲಿ ತುಲಾಭಾರ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರಜನರ ಕಾಣಿಕೆ, ವಂತಿಗೆ, ದೇಣಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
1991ರಲ್ಲಿ ಗರೋಡಿಗೆ ಹಾಗೂ ಮರದ ಮೂರ್ತಿಗಳಿಗೆ ಬಣ್ಣಕೊಟ್ಟು ಗರೋಡಿಯ ಜೀಣೋದ್ಧಾರವಾಗಿದೆ. ಈಗ 2024-25ರಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಶಿವರಾಯ ಶಿಲಾಮಯ ಗುಡಿಗಳ ನಿರ್ಮಾಣ ಹಾಗೂ ಹೊಸ ಗುಂಡ, ದೇಯಿಬೈದೆತಿ ಹಾಗೂ ಜುಮಾದಿಯ ಮರದ ಮೂರ್ತಿಗಳ ನಿರ್ಮಾಣದ ಯೋಜನೆಯು ಕಾರ್ಯರೂಪದಲ್ಲಿದೆ.
ನರಸಿಂಹ ಪರವ ಮತ್ತು ಸಂಘಡಿಗರು ಚೇರ್ಕಾಡಿ ಇವರು ನೃತ್ಯವಿಶಾರದರಾಗಿ, ಗಣಪ ಮಡಿವಾಳ ಮಾರಾಳಿ ಇವರು ಮಡಿವಾಳರಾಗಿ, ಅಶೋಕ ಸೇರಿಗಾರ ಪಾದೆಮಠ ಇವರು ವಾದ್ಯದವರಾಗಿ, ಚೀಂಕ ಮಾರಾಳಿ ಇವರು ಡೋಲಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಮಾರಾಳಿ, ನಾಲ್ಕೂರು,
ನಾಲ್ಕೂರು ಅಂಚೆ,
ಬ್ರಹ್ಮಾವರ ತಾಲೂಕು
ಉಡುಪಿ 576234.

ಅರ್ಚಕರು:

ಕೃಷ್ಣ ಪೂಜಾರಿ – 9880420559

ಮೊಕ್ತೇಸರರು:

ವಿಠಲ ಶೆಟ್ಟಿ – 990221148

ಮಾಹಿತಿ ನೀಡಿದವರು :

ಕೃಷ್ಣ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.12.2024