Baidashree

Shree Brahma Baidarkala Garodi Shiruru, Holebagilu

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಶೀರೂರು, ಹೊಳೆಬಾಗಿಲು

ಉಡುಪಿಯಿಂದ ಬಾರ್ಕೂರು – ಸೈಬ್ರಕಟ್ಟೆ – ಮಾರ್ಗವಾಗಿ ಶೀರೂರು ಮೂರುಕೈ ಸರ್ಕಲ್ನಿಂದ ಸುಮಾರು 450ಮೀ. ದೂರದಲ್ಲಿ ಬಲಕ್ಕೆ ಶೀರೂರು- ಮುದ್ದುಮನೆ ಮಾರ್ಗದಲ್ಲಿ ಸುಮಾರು 4ಕಿ.ಮೀ. ದೂರದಲ್ಲಿ ಸೀತಾನದಿ ದಡದಲ್ಲಿದೆ ಈ ಗರೋಡಿ.
ಇದು ಆಯದ ಗರೋಡಿಯಾಗಿದ್ದು, ಮುಖ್ಯದ್ವಾರವು ಉತ್ತರ ದಿಕ್ಕಿಕೆ ಇದೆ. ಬ್ರಹ್ಮಗುಡಿಯು ಪೂವಾಭಿಮುಖವಾಗಿದ್ದು ಷಢಾಧಾರ ಪ್ರತಿಷ್ಠೆಯನ್ನು ಹೊಂದಿದೆ.
ಗರಡಿಮನೆಯ ಪೂರ್ವಜ ಪೂಜಾರಿಯೊಬ್ಬರಿಗೆ ಬಿದ್ದ ಕನಸಿನಂತೆ, ಕೋಟಿಚೆನ್ನಯರು ತೆಂಕಣದಿಕ್ಕಿನಿಂದ ಹೊಸಾಳ ಚಾಂತಾರು ಮೂಲಕ ಮಂದಾರ್ತಿಗೆ ಬಂದು ದೇವಿಯ ಹತ್ತಿರ ಗರಡಿ ಕಟ್ಟಲು ಸ್ಥಳ ಕೇಳಿದಾಗ ಮೂರು ಕೈ ಶೀರೂರು ಸೀತಾನದಿ ಹತ್ತಿರ ನೆಲೆಯಾಗ ಬೇಕೆಂಬ ಅಪ್ಪಣೆಯಾಯಿತಂತೆ. ಅಲ್ಲಿ ಕೋಟಿಚೆನ್ನಯರ ಹೆಜ್ಜೆಯ ಗುರುತು, ಸುರಿಯ ಊರಿದ ನಿಶಾನೆ ತೋರಿ ಬಂದಲ್ಲಿ ಈ ಗರೋಡಿ ಕಟ್ಟಲಾಯಿತೆಂದು ಸ್ಥಳ ಪುರಾಣದಲ್ಲಿ ತಿಳಿದು ಬರುತ್ತದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹದ ಬೆಳ್ಳಿಯ ಕಿರೀಟ ಹಾಗೂ ಕತ್ತಿಯನ್ನು ಹೊಂದಿದ ನಾಗ ಬ್ರಹ್ಮರ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮತ್ತು ಇಬ್ಬರು ಮಕ್ಕಳ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಮೈಸಂದಾಯ, ಕುಜುಂಬ ಕಾಂಜವ, ಹಾಗೂ ಬಲ್ಲಾಳರ ಮಣೆಮಂಚ ಮತ್ತು ದೇಯಿಬೈದೆತಿಯ ಮರದ ಮೂರ್ತಿಯಿದೆ.
ಬ್ರಹ್ಮಗುಡಿಯ ಹೊರಗೆ ಎರಡು ಮುಕ್ಕಾಲಿ ಮಂಚ, ಚೌ೦ಡಿ ಮಣೆಮಂಚ, ಮೈಂದಾಳ್ತಿ ಮತ್ತು ಮಗುವಿನ ಮರದ ಮೂರ್ತಿ, ಜೋಗಿಪುರುಷ ಮರದ ಮೂರ್ತಿ ಹಾಗೂ ಗುರುಕಂಭಗಳಿವೆ.
ಗರೋಡಿಯ ಬಾಗಿಲ ಹತ್ತಿರ ಜಗುಲಿಯಲ್ಲಿ ಬಾಗಿಲಬೊಬ್ಬರ್ಯನ ಮರದ ಮೂರ್ತಿಯಿದೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯ ಮತ್ತು ಬಂಟರ ಮರದ ಮೂರ್ತಿ ಹಾಗೂ ಕಾಳಿಯ ಮರದ ಗದ್ದಿಗೆಯಿದೆ.
ಗರೋಡಿಯ ಆವರಣದೊಳಗೆ ತುಳಸೀಕಟ್ಟೆ, ಬಲಿಕಲ್ಲು, ಅವಳಿ ನಾಗ ಸಂಪಿಗೆ ಮರಗಳ ಕಟ್ಟೆಯಿದೆ.

ಬಾಲಕೃಷ್ಣ ಪೂಜಾರಿ

ನಿತ್ಯಾನಂದ ಪೂಜಾರಿ

2014ರಿಂದ ಬಾಲಕೃಷ್ಣ ಪೂಜಾರಿ (47 ವರ್ಷ) ಹಾಗೂ 2024ರಿಂದ ನಿತ್ಯಾನಂದ ಪೂಜಾರಿ (40 ವರ್ಷ) ಇವರುಗಳು ಇಲ್ಲಿ ಅರ್ಚಕರಾಗಿದ್ದಾರೆ. ಇವರ ಮೊದಲು ಕೃಷ್ಣ ಪೂಜಾರಿ (ಮಾವ) ಗಿರಿಯ ಪೂಜಾರಿ, (ಅಜ್ಜ) ಇಲ್ಲಿಯ ಅರ್ಚಕರಾಗಿದ್ದರು.

ಬಸವ ಪೂಜಾರಿ (60 ವರ್ಷ) ಇವರು ಇಲ್ಲಿಯ ಬೈದರ ದರ್ಶನದ ಸ್ಥಳ ಪಾತ್ರಿ. ಹಿಂದೆ ಗಿರಿಯ ಪೂಜಾರಿಯವರು ಇಲ್ಲಿ ಬೈದರ ದರ್ಶನದ ಸ್ಥಳ ಪಾತ್ರಿಯೂ ಆಗಿದ್ದರು. ಪಾರ್ವತಿ ಪೂಜಾರಿ ಎಂಬ ಮಹಿಳೆಯೊಬ್ಬರು ಇಲ್ಲಿ ಮೈಂದಾಳ್ತಿಯ ದರ್ಶನ ಸೇವೆಯ ಪಾತ್ರಿಯಾಗಿದ್ದಾರೆ.
ರಾಮಣ್ಣ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರಾಗಿದ್ದಾರೆ. ಹಿಂದೆ ಪಟೇಲ್ ಶೀನಪ್ಪ ಶೆಟ್ಟಿಯವರು ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಕದಿರುಕಟ್ಟುವುದು, ಕೊಡಿ ತಿಂಗಳಲ್ಲಿ ಕಾಯಿದೆ ಪೂಜೆ, ಅಗೆಲು ಸೇವೆ, ಪ್ರತೀ ವರ್ಷವೂ ಏಪ್ರಿಲ್ 10ಕ್ಕೆ ಹಾಲು ಹಬ್ಬ, ಗೆಂಡ ಸೇವೆ, ದರ್ಶನ, ತುಲಾಭಾರ ಸೇವೆಗಳು ನಡೆಯುತ್ತವೆ.
ಶೀರೂರು, ಹೊರಲಾಳಿ, ಭಾಗದ ಜನರು ಈ ಗರೋಡಿಯಲ್ಲಿ ತುಲಾಭಾರ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರವರ ವಂತಿಗೆ, ಸಹಾಯ ಧನಗಳಿಂದ ಗರೋಡಿಯ ಖರ್ಚು ವೆಚ್ಚಗಳನ್ನು ಭರಿಸಲಾಗುತ್ತದೆ.
ಗರೋಡಿಯು ಮಾರ್ಚ 2024ರಲ್ಲಿ ಜೀರ್ಣೋದ್ಧಾರಗೊಂಡಿದೆ. ಜೀರ್ಣೋದ್ಧಾರಕ್ಕೆ ಮೊದಲು, 2003 ರಲ್ಲಿ ಬೈದಶ್ರೀಯಿಂದ ಪ್ರಕಾಶಿತ ಪುಸ್ತಕ “ಬೈದ ದರ್ಶನ” ಪುಸ್ತಕದಲ್ಲಿ ಪ್ರಕಟಿತ, ಈ ಗರೋಡಿಯ ಛಾಯಾಚಿತ್ರ ಇಲ್ಲಿದೆ.
ದಿನೇಶ ಮಡಿವಾಳ ಶೀರೂರು ಮಡಿವಾಳರಾಗಿ, ರಾಜು ದೇವಾಡಿಗ ಶೀರೂರು ವಾದ್ಯದವರಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಶೀರೂರು ಹೊಳೆಬಾಗಿಲು,
33ನೇ ಶೀರೂರು ಮುದ್ದುಮನೆ,
ಮುದ್ದುಮನೆ ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ 576223.

ಅರ್ಚಕರು:

ಬಾಲಕೃಷ್ಣ ಪೂಜಾರಿ – 9901446734
ನಿತ್ಯಾನಂದ ಪೂಜಾರಿ – 9900469117

ಮಾಹಿತಿ ನೀಡಿದವರು :

ನಿತ್ಯಾನಂದ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

02.01.2025