Baidashree

Shree Brahma Baidarkala, Chikkamma Devi Garodi Pilkala, Jathebettu

ಶ್ರೀ ಬ್ರಹ್ಮ ಬೈದರ್ಕಳ ಮತ್ತು ಚಿಕ್ಕಮ್ಮ ದೇವಿ ಗರೋಡಿ ಪಿಳ್ಕಲ, ಜಾತಬೆಟ್ಟು.

ಉಡುಪಿ – ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ ನಡುವೆ ಜಾತ ಬೆಟ್ಟುವಿನಲ್ಲಿ ಬಲಕ್ಕೆ ತಿರುಗಿ ಕೊಳಲಗಿರಿ ರಸ್ತೆಯಲ್ಲಿ ಒಂದು ಕಿ. ಮೀ. ಸಾಗುವಾಗ ‘ಬಿಲ್ಲ’ ಶಾಲೆ ಸಿಗುತ್ತದೆ. ಬಿಲ್ಲ ಶಾಲೆಯಿಂದ ಎಡಕ್ಕೆ ತಿರುಗಿ ಸುಮಾರು ಅರ್ಧ ಕಿ. ಮೀ. ಸಾಗಿದಾಗ ಪಿಳ್ಕಲ ಗರೋಡಿ ಸಿಗುತ್ತದೆ.
ಉಡುಪಿ ತಾಲೂಕು, ಉಪ್ಪೂರು ಗ್ರಾಮ ಜಾತಬೆಟ್ಟುವಿನಲ್ಲಿರುವ ಶ್ರೀ ಬ್ರಹ್ಮಬೈದರ್ಕಳ ಮತ್ತು ಚಿಕ್ಕಮ್ಮದೇವಿ ಗರೋಡಿ ಪಿಳ್ಕಲ ಬಹಳ ಪುರಾತನ ಗರೋಡಿಯಾಗಿದೆ. ಇದು ಆಯದ ಗರೋಡಿಯಾಗಿದ್ದು ಷಢಾದಾರ ಪ್ರತಿಷ್ಠೆಗೊಂಡಿದೆ. ಮುಖ್ಯ ದ್ವಾರ ಮೂಡು ದಿಕ್ಕಿಗಿದೆ. ಗರೋಡಿ ಹಿಂಭಾಗದಲ್ಲಿ ನಾಗ ಸನ್ನಿಧಿ ಇರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಗರೋಡಿಯಲ್ಲಿ ಪಶ್ಚಿಮ ಮುಖವಾಗಿಯೂ ಒಂದು ಬಾಗಿಲನ್ನು ಇರಿಸಲಾಗಿದೆ.
ಗರೋಡಿಯಲ್ಲಿ ಗುಂಡದ ಒಳಗೆ ಮೇಲೆ ಗಾಳಿದೇವರು, ಕೆಳಗೆ ನಾಗ ಬ್ರಹ್ಮರ ಮೂರ್ತಿ ಇದೆ.
ಗುಂಡದ ಎಡ ಬದಿಯಲ್ಲಿ ಕೋಟಿಚೆನ್ನಯರ ಪಾಪೆ, ಎರಡು ಮಕ್ಕಳ ಪಾಪೆ, ದೇಯಿ ಬೈದೆತಿ ಪಾಪೆ ಇದೆ.
ಗುಂಡದ ಬಲಕ್ಕೆ ಕುಜುಂಬ ಕಾಂಜವ ಮತ್ತು ಒಬ್ಬ ಹುಡುಗನ ಪಾಪೆ ಇದೆ.
ವಾಲಗ ಚಾವಡಿಯಲ್ಲಿ ನಂದಿ, ಜುಮಾದಿ, ಮಾಯಂದಾಳ್ ಮತ್ತು ಮಗು, ಜೋಗಿಪುರುಷ, ಗುರುಕಂಬ, ಪ್ರಧಾನವಾಗಿ ಚಿಕ್ಕಮ್ಮ ದೇವಿ, ಮರ್ಲ ಚಿಕ್ಕು, ಬಾಳ್ ಚಿಕ್ಕು, ಹೈಗುಳಿ ದೈವಗಳ ಪಾಪೆಗಳಿವೆ.
ಗರೋಡಿಯ ಆವರಣದಲ್ಲಿ ಹುಲಿಚಾಮುಂಡಿ ದೈವ ಇದೆ. ಆಯದ ಕಲ್ಲು ಇದೆ. ಗರೋಡಿಯ ಹೊರ ಆವರಣದಲ್ಲಿ ಪಶ್ಚಿಮದಲ್ಲಿ ನಾಗ ಸನ್ನಿಧಿ ಇದೆ.

ಗೋವಿಂದ ಪೂಜಾರಿ

ಕಾಡ್ಯ ಪೂಜಾರಿ

ಈ ಗರೋಡಿಯಲ್ಲಿ 2021 ರಿಂದ ಜಾತಬೆಟ್ಟು ದೇವಿ ನಿಲಯದ ದಿ. ನಕ್ರ ಪೂಜಾರಿ ಅವರ ಪುತ್ರ ಗೋವಿಂದ ಪೂಜಾರಿ (ಪ್ರಾಯ – 60) ಪೂ ಪೂಜನೆಯವರಾಗಿದ್ದಾರೆ. ಇವರ ಮೊದಲು ಸುಮಾರು ಎಂಟು ವರುಷಗಳ ಕಾಲ ಸಾಧು ಪೂಜಾರಿಯವರು ಸೇವೆ ಸಲ್ಲಿಸಿದ್ದರು. ಸಾಧು ಪೂಜಾರಿಯವರ ಮೊದಲು 1994 ರಿಂದ 20 ವರ್ಷಗಳ ಕಾಲ ಕಾಡ್ಯ ಪೂಜಾರಿಯವರು ಸೇವೆ ಸಲ್ಲಿಸಿದ್ದರು.

ರಾಜು ಪೂಜಾರಿ

ಉಪ್ಪೂರು ಜಾತ ಬೆಟ್ಟುವಿನ ಕೊರಗ ಪೂಜಾರಿಯವರ ಪುತ್ರ ರಾಜು ಪೂಜಾರಿಯವರು ಗರೋಡಿ ಆಡಳಿತ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಕೊಳಲಗಿರಿಯ ಕೇದಿಗೆ ಜಿಡ್ಡ ಭೋಜ ಪೂಜಾರಿಯವರ ಪುತ್ರ ಅರುಣ್ ಕುಮಾರ್ ಕಾರ್ಯದರ್ಶಿಯಾಗಿದ್ದಾರೆ.
ಪ್ರಸ್ತುತ ಗರೋಡಿಗೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಬಿಕ್ರ ಪೂಜಾರಿಯವರು ಸ್ಥಳ ಪಾತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಇಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರಗಳಂದು ಪೂಜೆ ಇದೆ. ಪೆರ್ಡೂರು ಸಂಕ್ರಮಣವನ್ನು ಅನುಸರಿಸಿ ಸಂಕ್ರಾಂತಿ ಪೂಜೆ ಪ್ರತಿ ತಿಂಗಳು ಇದೆ. ಉಳಿದಂತೆ ಚೌತಿ ಪೂಜೆ ಇದೆ. ಸೋಣ ತಿಂಗಳಲ್ಲಿ ಹೂವಿನ ಪೂಜೆ ನಡೆಯುತ್ತದೆ. ಕದಿರು ಕಟ್ಟುವುದು ಇದೆ. ಸೋಣ ತಿಂಗಳಲ್ಲಿ ಎಂಟನೇ ದಿನ ಊರು ಸೇರಿ ಕಜ್ಜಾಯ ಸೇವೆ ಇದೆ. ಸುಮಾರು 150 ಕುಟುಂಬಗಳು ಸೇರುತ್ತಾರೆ.
ಈ ಗರೋಡಿಯಲ್ಲಿ ಕೊಡಿ ತಿಂಗಳಿನಲ್ಲಿ ಸಂಕ್ರಮಣದ 9ನೇ ದಿನ ಖಾಯಂ ಆಗಿ ಅನ್ನ ನೈವೇದ್ಯ ಸೇವೆ ಜರಗುತ್ತವೆ. ಅಂದು ದರುಶನ ಸೇವೆ ಇದೆ. ಸುಗ್ಗಿ ಸಂಕ್ರಮಣದ 2, 3 ದಿನಗಳಲ್ಲಿ ಅಗೆಲು ಸೇವೆ, ಮರುದಿನ ನೇಮೋತ್ಸವ, ಬೆಳಿಗ್ಗೆ ಮಾಯಂದಾಳ್ ನೇಮೋತ್ಸವ ಕಟ್ಟು ಕಟ್ಟಳೆಯಾಗಿ ನಡೆಯುತ್ತದೆ. ಇದೇ ಸಂದರ್ಭದಲ್ಲಿ ಅಪರೂಪಕ್ಕೊಮ್ಮೆ ದೈವಗಳಿಗೆ ಕೋಲ ನಡೆಯುತ್ತದೆ. ಮರುದಿನ ಶುದ್ಧದ ಪಸರಣೆ ಇದೆ. ನವಕ ಪ್ರಧಾನ ಹೋಮ ಇದೆ. ಇಲ್ಲಿ ತುಲಾಭಾರ ಸೇವೆ ಇದೆ.
ಇಲ್ಲಿನ ಕೂಡುಕಟ್ಟಿಗೆ ಉಪ್ಪೂರು, ಹೇರೂರು, ಕುದ್ರುಬೆಟ್ಟು, ನಡುಬೆಟ್ಟು, ಹೇರಬೆಟ್ಟು, ತೆಂಕಬೆಟ್ಟು, ಮಾಯಾಡಿ, ಸಾಲ್ಮರ, ಲಕ್ಷೀನಗರದ ಮಂದಿ ಸೇರುತ್ತಾರೆ.
ಗರೋಡಿಯಲ್ಲಿ ನೀರು ಸ್ನಾನದ ಆಚರಣೆ ಇದೆ. ಮದುವೆ ಮುಂತಾದ ಶುಭ ಸಂದರ್ಭದಲ್ಲಿ ಜೋಡು ಕಾಯಿ ಕಾಣಿಕೆ ತೆಗೆದಿಡುತ್ತಾರೆ. ಹೆರಿಗೆ ನಂತರ ತಿಂಗೊಳ್ ಮಾಡಿಸುವ ಕ್ರಮ ಇದೆ. ಕಲಶ ಕಟ್ಟಿ ಶುದ್ಧ ಮಾಡುವ ಪದ್ಧತಿ ಇದೆ. ನೇಮದಂದು ಗರೊಡಿಯ ಹೊರಗೆ ದಲ್ಲೆ ಹಾಕುತ್ತಾರೆ.
ಗರೋಡಿಯ ಖರ್ಚು ವೆಚ್ಚಗಳು ವಂತಿಗೆ, ವರಡದ ರೂಪದಲ್ಲಿ ನಡೆಯುತ್ತದೆ. ಪ್ರಸಕ್ತ ಸುಂದರ ಪೂಜಾರಿ, ವಾಸು ಪೂಜಾರಿ, ಸುರೇಶ್ ಪೂಜಾರಿ ಇವರು ಈ ಕಾರ್ಯವನ್ನು ನಿಭಾಯಿಸುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟ 45 ಸೆಂಟ್ಸ ಜಾಗ ಇದೆ. ಸುಮಾರು 75ವರ್ಷಗಳ ಕಾಲ ಗರೋಡಿ ಇದ್ದ ಕುರುಹೂ ಇಲ್ಲದ ಜಾಗದಲ್ಲಿ ಸುಸಜ್ಜಿತ ಗರೋಡಿಯನ್ನು ಪುನರ್ ನಿರ್ಮಿಸಿದ್ದು 15-5-1994ರಲ್ಲಿ ಪ್ರತಿಷ್ಟೆ ಗೊಂಡಿದೆ. ಬಳಿಕ 2006ರಲ್ಲಿ ಹಾಗೂ 2020ರಲ್ಲಿ ಬ್ರಹ್ಮಕಲಶ ಗೊಂಡಿದೆ.
ಇಲ್ಲಿ ಬೂಬ ಪರವ, ಅಂಗರ ಪರವ ಮತ್ತು ಸಂಗಡಿಗರು ನೃತ್ಯವಿಶಾರದರಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಮತ್ತು ಚಿಕ್ಕಮ್ಮ ದೇವಿ ಗರೋಡಿ ಪಿಳ್ಕಲ, ಜಾತಬೆಟ್ಟು.
ಉಪ್ಪೂರು ಗ್ರಾಮ,
ಉಡುಪಿ 576105.

ಆಡಳಿತ ಸಮಿತಿ:

ಅಧ್ಯಕ್ಷರು – ರಾಜು ಪೂಜಾರಿ – 9681842465
ಕಾರ್ಯದರ್ಶಿ: ಅರುಣ್ ಕುಮಾರ್ – 9611362284

ಮಾಹಿತಿ ನೀಡಿದವರು :

ರಾಜು ಪೂಜಾರಿ,
ಗೋವಿಂದ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

13.10.22