Baidashree

Abbakka Dharakka Umamaheshwari Shree Brahma Baidarkala Garodi, Karje

ಅಬ್ಬಕ್ಕ ದಾರಕ್ಕ ಉಮಾಮಹೇಶ್ವರಿ ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಕರ್ಜೆ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್ಎಚ್ 66 ರಲ್ಲಿ ಬ್ರಹ್ಮಾವರಕ್ಕೆ ಮೊದಲು ಭದ್ರಗಿರಿಯ ಬಲಕ್ಕೆ ತಿರುಗಿ ಬ್ರಹ್ಮಾವರ – ಹೆಬ್ರಿ ರಸ್ತೆಯಲ್ಲಿ ಸುಮಾರು 17.58 ಕಿ.ಮೀ. ದೂರದ ಕರ್ಜೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತಿರದಲ್ಲಿದೆ ಈ ಗರೋಡಿ.
ಗರೋಡಿಯು ಉತ್ತರಾಭಿಮುಖವಾದ ಒಂದು ದ್ವಾರವನ್ನು ಹೊಂದಿದ್ದು, ಬ್ರಹ್ಮಗುಡಿಯು ಪೂರ್ವಾಭಿಮುಖವಾಗಿದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಹಿಂದಿನ ಕಾಲದಲ್ಲಿ ಕೆಲವು ಭಕ್ತರು ಕಾಶಿ ಯಾತ್ರೆಗೆಂದು ಹೋಗುತ್ತಿದ್ದಾಗ, ಬೈದೇರುಗಳು ಅವರಿಗೆ ನೀವು “ಕಾಶಿಗೆ ಹೋಗುವುದು ಬೇಡ, ಇಲ್ಲಿಯೇ ಕಾಶಿಯ ತೀರ್ಥವಿದೆ“ಎಂದು ಕರ್ಜೆಯಲ್ಲಿ ನೆಲೆ ನಿಂತರಂತೆ. ಹಾಗೆ ಇಲ್ಲಿ ಗರೋಡಿಯ ಸ್ಥಾಪನೆಯಾಯಿತಂತೆ.
ಗರೋಡಿಯ ಒಳಗೆ ಬ್ರಹ್ಮಗುಡಿಯ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಬೆಳ್ಳಿಯ ಕೊಡೆ (ಸತ್ತಿಗೆ) ಯನ್ನು ಹೊಂದಿದ ಮೂರ್ತಿಯಿದೆ. ಗುಂಡದ ಮದ್ಯದ ಅಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಯಿದೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಪಟ್ಟದ ಪಂಜುರ್ಲಿ, ಮರ್ಲಚಿಕ್ಕು ದೈವಗಳ ಮಣೆಮಂಚವಿದೆ.
ಪಕ್ಕದಲ್ಲಿ ಜೋಗಿಪುರುಷರ ಮರದ ಮೂರ್ತಿ, ಹೈಗುಳಿ, ಯಕ್ಷಿ ಹಾಗೂ ಭಟ್ಟರ್ತಿ ದೈವಗಳ ಮಣೆಮಂಚವಿದೆ.
ಗರೋಡಿಯ ಹೊರಗೆ ಬಾಗಿಲ ಪಕ್ಕದ ಜಗಲಿಯಲ್ಲಿ ಬಾಗಿಲ ಬೊಬ್ಬರ್ಯ ಎರಡು ಮಣೆಮಂಚಗಳಿವೆ.
ಗರೋಡಿಯ ಎದುರಿರುವ ಗುಡಿಯಲ್ಲಿ ಮಾಯಂದಾಳ್ ಮತ್ತು ಮಗು, ತೊಟ್ಟಿಲುಗಳಿವೆ.
ಗರೋಡಿಯ ಹಿಂಬದಿಯಲ್ಲಿರುವ ಗುಡಿಯಲ್ಲಿ ಕಾರ್ತಿ, ಬೈಕಾಡ್ತಿ ದೈವಗಳ ಮರದ ಮೂರ್ತಿಗಳಿರುವ ಸಾನಿಧ್ಯವಿದೆ. ಗರೋಡಿಯ ಆವರಣದಲ್ಲಿ ತುಳಸಿಕಟ್ಟೆ, ಬಲಿಕಲ್ಲು, ನೇಮ ಚಾವಡಿಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.

ಅನುರಾಗ ಎಸ್. ಪೂಜಾರಿ

ಅನುರಾಗ ಎಸ್. ಪೂಜಾರಿ (46 ವರ್ಷ) ಇವರು 2011 ರಿಂದ ಇಲ್ಲಿಯ ಅರ್ಚಕರಾಗಿದ್ದಾರೆ. ಇವರು ಮೊದಲು ಬಾಬು ಪೂಜಾರಿ, ಕೂಕ್ರ ಪೂಜಾರಿ, ಕೊರಗ ಪೂಜಾರಿ, ಮುತ್ತು ಪೂಜಾರಿಯವರು ಇಲ್ಲಿ ಅರ್ಚಕರಾಗಿ ಸೇವೆ ಮಾಡಿದ್ದರು.
ಗುಂಡು ಪೂಜಾರಿ (55 ವರ್ಷ) ಗೋಪಾಲ ಪೂಜಾರಿ (45 ವರ್ಷ) ಮಂಜು ಪೂಜಾರಿ (38 ವರ್ಷ) ಇವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳು. ಇವರ ಮೊದಲು ಶುಕ್ರ ಪೂಜಾರಿ, ಕೃಷ್ಣಯ್ಯ ಪೂಜಾರಿಯವರು ಇಲ್ಲಿ ಸ್ಥಳ ಪಾತ್ರಿಗಳಾಗಿದ್ದರು.
ಶೇಖರ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರಾಗಿ, ಕಿರಣ್ ಕುಮಾರ್ ಶೆಟ್ಟಿ ಯವರು ಆಡಳಿತ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಪ್ರತೀವರ್ಷ ವೃಶ್ಚಿಕ ಸಂಕ್ರಮಣದಂದು ಹಾಲು ಹಬ್ಬ, ದರ್ಶನ ಸೇವೆ, ಅಗೆಲು ಸೇವೆ, ಫೆಬ್ರವರಿ ತಿಂಗಳ 26 ನೇ ತಾರೀಖಿಗೆ ಕಂಬ ಮುಹೂರ್ತ, 27 ಕ್ಕೆ ಅಗೆಲು ಸೇವೆ, 28 ಕ್ಕೆ ಬೈದರ್ಕಳ ನೇಮೋತ್ಸವ ಹಾಗೂ ದರ್ಶನ ಸೇವೆ ನಡೆಯುತ್ತದೆ. ಏಪ್ರಿಲ್ ತಿಂಗಳ 14ನೇ ತಾರೀಖಿನಂದು ಗೆಂಡ ಸೇವೆ, ಪಂಜುರ್ಲಿ ಕೋಲ, ಮಾಯಂದಾಲ್ ಕೋಲ, ಜೋಗಿಪರುಷ ಕೋಲ ಹಾಗೂ ತುಲಾಭಾರ ಸೇವೆಗಳು ನಡೆಯುತ್ತದೆ.
ಹೊಸೂರು, ಮೈರ್ಮಾಡಿ, ಕುರ್ಪಾಡಿ, ಸುರಾಲು, ಹಳುವಳ್ಳಿ ಗ್ರಾಮಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿರುತ್ತವೆ. ಕೂಡುಕಟ್ಟಿಗೆ ಸೇರಿದ ಜನರು ತುಲಾಭಾರ ಸೇವೆ, ಮದುವೆ ಮುಂತಾದ ಶುಭಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವಂತಿಗೆ, ಸಹಾಯಧನ, ಕಾಣಿಕೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಯು 1998, 2002 ರಲ್ಲಿ ಜೀರ್ಣೋದ್ಧಾರಗೊಂಡಿದ್ದು ಈಗ ಪುನ: ಜೀರ್ಣೋದ್ಧಾರವಾಗುವ ಯೋಜನೆಯಲ್ಲಿದೆ.
ನರಸಿಂಹ ಪರವ ಮತ್ತು ಸಂಘಡಿಗರು ಚೇರ್ಕಾಡಿ ಇವರು ನೃತ್ಯವಿಶಾರದರಾಗಿ, ನಾರಾಯಣ ಮಡಿವಾಳ, ಚೇರ್ಕಾಡಿ ಮಡಿವಾಳರಾಗಿ, ದಿನೇಶ ದೇವಾಡಿಗ ಸೂರಾಲು ವಾಧ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಅಬ್ಬಕ್ಕ ದಾರಕ್ಕ ಉಮಾಮಹೇಶ್ವರಿ ಶ್ರೀ ಬ್ರಹ್ಮಬೈದರ್ಕಳಲ ಗರೋಡಿ ಕರ್ಜೆ,
ಹೊಸೂರು ಗ್ರಾಮ, ಕರ್ಜೆ ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ 576215.

ಗರೋಡಿಯ ಅರ್ಚಕರು :

ಅನುರಾಗ ಎಸ್. ಪೂಜಾರಿ
ಮೊಬೈಲ್ : 8497878588, 9901878757

ಮಾಹಿತಿ ನೀಡಿದವರು :

ಅನುರಾಗ ಎಸ್. ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.12.2024