ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಹೊಸಾಳ, ಬಾರ್ಕೂರು.
ಉಡುಪಿಯಿಂದ ಬಾರ್ಕೂರು ತಲುಪಿ ಬಾರ್ಕೂರು ಪೇಟೆಯಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿದೆ ಈ ಗರೋಡಿ.
ಕೆಂಪು ಮುರಕಲ್ಲಿನಿಂದ ಕಟ್ಟಲ್ಪಟ್ಟು ನವೀಕೃತಗೊಂಡ ಈ ಗರೋಡಿಯ ದ್ವಾರವು ಪೂರ್ವಾಭಿಮುಖವಾಗಿದ್ದು ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ. ಬ್ರಹ್ಮಗುಂಡವು ಷಡಾಧಾರ ಪ್ರತಿಷ್ಠೆಯನ್ನು ಹೊಂದಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಬೆಳ್ಳಿಯ ಪ್ರಭಾವಳಿಯುಳ್ಳ ಪಂಚಲೋಹದ ನಾಗಬ್ರಹ್ಮರ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮತ್ತು ಇಬ್ಬರು ಮಕ್ಕಳು, ದೇಯಿಬೈದೆತಿ ಹಾಗೂ ನಂದಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಒಕ್ಕುಬಲ್ಲಾಳ, ಕುಜುಂಬ ಕಾಂಜವರ ಮರದ ಮೂರ್ತಿ, ಮೈಸಂದಾಯ ದೈವದ ಮಣೆಮಂಚದ ಮೇಲೆ ಕಂಚಿನ ಮುಖಮೂರ್ತಿಯಿದೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಹೈಗುಳಿ ದೈವದ ಎರಡು ಮಣೆಮಂಚವಿದೆ. ಬ್ರಹ್ಮಗುಡಿಯ ಎಡಭಾಗದಲ್ಲಿ ಗದ್ದಿಗೆಯಲ್ಲಿ ಪಂಜುರ್ಲಿಯ ಕಂಚಿನ ಮುಖಮೂರ್ತಿ, ಹಾಗೂ ಪರಿವಾರ ದೈವಗಳ ಮೂರು ಮಣೆಮಂಚಗಳಿವೆ.
ಪಕ್ಕದಲ್ಲಿ ಮೈಂದಾಳ್ತಿ ಹಾಗೂ ಮಗುವಿನ ಮರದ ಮೂರ್ತಿ, ಚಿಕ್ಕಮ್ಮ ಪರಿವಾರ ದೈವಗಳ ಎರಡು ಮಣೆಮಂಚ, ಚಿಕ್ಕಮ್ಮ, ಜೋಗಿಪುರುಷ, ಚೌಂಡಿಯ ಮರದ ಮೂರ್ತಿಗಳು, ಗುರುಕಂಭ, ಚೌಂಡಿ ಪರಿವಾರ ದೈವಗಳ ಎರಡು ಮಣೆಮಂಚಗಳಿವೆ.
ಗರೋಡಿಯ ದ್ವಾರದ ಎರಡು ಬದಿಗಳಲ್ಲಿ ಬಾಗಿಲ ಬೊಬ್ಬರ್ಯನ ಎರಡು ಮರದ ಮೂರ್ತಿಗಳಿವೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯ, ಬಂಟರ ಮರದ ಮೂರ್ತಿಗಳಿವೆ. ಈ ಮೂರ್ತಿಗಳ ಹಿಂದೆ ವನದುರ್ಗಾದೇವಿಯ ಮರದ ಹಲಗೆಯ ಮೇಲೆ ಬಿಡಿಸಿದ ವನದುರ್ಗಾದೇವಿಯ ಚಿತ್ರಣವಿದೆ.
ಗರೋಡಿಯ ಎಡಭಾಗದಲ್ಲಿರುವ ಶಿಲಾಮಯ ಗುಡಿಯಲ್ಲಿ ಕಲ್ಕುಡ, ಹಾಗೂ ಕಾಳಮ್ಮ ದೈವಗಳ ಕಂಚಿನ ಮೂರ್ತಿಗಳಿಗೆ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದಲ್ಲಿ ಕ್ಷೇತ್ರಪಾಲ ದೈವದ ಕಲ್ಲಿನ ಕಂಬ, ತುಳಸೀಕಟ್ಟೆ, ಮೂರು ಬಲಿಕಲ್ಲುಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.
ರವಿ ಪೂಜಾರಿ (55 ವರ್ಷ) ಇವರು ಗರೋಡಿಯ ಅರ್ಚಕರಾಗಿರುವರು. ಇವರ ಮೊದಲು ರಘು ಪೂಜಾರಿ, ವೆಂಕಟಯ್ಯ ಪೂಜಾರಿ, ಮಂಜಯ್ಯ ಪೂಜಾರಿ, ಕುರುಡ ಪೂಜಾರಿಯವರು ಅರ್ಚಕರಾಗಿ ಈ ಗರೋಡಿಯ ಸೇವೆ ಮಾಡಿದ್ದರು.
ರಘು ಪೂಜಾರಿ
ರಘು ಪೂಜಾರಿ (63 ವರ್ಷ) ಹಾಗೂ ಕೃಷ್ಣ ಪೂಜಾರಿ (60 ವರ್ಷ) ಇವರು ಈ ಗರೋಡಿಯ ಬೈದರ ದರ್ಶನದ ಸ್ಥಳ ಪಾತ್ರಿಗಳು. ಇವರ ಮೊದಲು ವೆಂಕಟಯ್ಯ ಪೂಜಾರಿ, ಬಚ್ಚ ಪೂಜಾರಿಯವರು ಈ ಸೇವೆ ಮಾಡಿದ್ದರು.
ಯೆಡ್ತರೆ ಮನೆ ಗೌತಮ ಹೆಗ್ಡೆಯವರು ಗರೋಡಿಯ ಮೊಕ್ತೇಸರರಾಗಿದ್ದಾರೆ. ಇವರ ಮೊದಲು ವೈ,ಎಸ್. ಹೆಗ್ಡೆ, ವಿಠಲ ಹೆಗ್ಡೆ, ಮಂಜಯ್ಯ ಹೆಗ್ಡೆಯವರು ಇಲ್ಲಿ ಮೊಕ್ತೇಸರರಾಗಿದ್ದರು.
ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು ಗೌತಮ ಹೆಗ್ಡೆಯವರು ಅಧ್ಯಕ್ಷರಾಗಿ, ಗರೋಡಿಮನೆ ಜಗದೀಶ ಪೂಜಾರಿಯವರು ಕಾರ್ಯದರ್ಶಿಯಾಗಿ, ಪ್ರಮೋದ್ ಪೂಜಾರಿಯವರು ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೊಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ (ಪೆರ್ಡೂರು), ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹಸಿರುವಾಣಿ ಪೂಜೆ, ಕದಿರುಕಟ್ಟುವುದು, ಅಷ್ಟಮಿಯಂದು ಆರ್ಘ್ಯ ಬಿಟ್ಟು ಮರುದಿನ ಅಗೆಲು ಸೇವೆ, ಡಿಸೆಂಬರ್ ತಿಂಗಳಲ್ಲಿ ಅಗೆಲು ಸೇವೆ, ಹಾಲುಹಬ್ಬ, ತುಲಾಭಾರ ಸೇವೆ, ಏಪ್ರಿಲ್ ತಿಂಗಳಲ್ಲಿ ಅಗೆಲು ಸೇವೆ, ಮೂರು ವರ್ಷಕ್ಕೊಮ್ಮೆ ನೇಮೋತ್ಸವ, ಜೋಗಿಪುರುಷ, ಮೈಂದಾಳ್ತಿ, ಹಾಗೂ ಶಿವರಾಯ ಕೋಲ, ಕಲ್ಕುಡ, ಪಂಜುರ್ಲಿ, ಕಾಳಮ್ಮ ಕೋಲ ನಡೆಯುತ್ತದೆ.
ಹೊಸಾಳ ಗ್ರಾಮ, ಕಚ್ಚೂರು, ಹಾಲೆಕೊಡೆ, ಹನೆಹಳ್ಳಿ, ಮೂಡುತೋಟ, ಕೂರಾಡಿ, ನೀಲಾವರ, ಯಡ್ತಾಡಿ, ಬಂಡಿಮಠ, ನಾಗರಮಠ, ನಲ್ಕುದ್ರು ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರುತ್ತವೆ. ಈ ಕೂಡುಕಟ್ಟಿನ ಜನರು ತುಲಾಭಾರ ಸೇವೆ, ಮದುವೆ ಮುಂತಾದ ಶುಭಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರಜನರ ವಂತಿಗೆಯಿಂದ ಗರೋಡಿಯ ಕಾರ್ಯಕ್ರಮಗಳ ಖರ್ಚುವೆಚ್ಚವನ್ನು ಭರಿಸಲಾಗುತ್ತದೆ.
ಗರೋಡಿಗೆ ಸಂಬಂಧಪಟ್ಟ 33 ಸೆಂಟ್ಸ ಜಾಗವು ಗರೋಡಿಯ ಹೆಸರಿನಲ್ಲಿದೆ. 1981ರಲ್ಲಿ ಜೀರ್ಣೋದ್ಧಾರಗೊಂದ ನಂತರ 26ನೇ ಮೇ 2022ರಲ್ಲಿ ಜೀರ್ಣೋದ್ಧಾರಗೊಂಡಿದೆ.
ನರಸಿಂಹ ಪರವ ಚೇರ್ಕಾಡಿ ಇವರು ಈ ಗರೋಡಿಯ ನೃತ್ಯವಿಶಾರದರಾಗಿ, ಗಣೇಶ ಮಡಿವಾಳ, ಹೊಸಾಳ ಇವರು ಮಡಿವಾಳರಾಗಿ, ರಾಮ ದೇವಾಡಿಗ ಹೊಸಾಳ ಇವರು ವಾದ್ಯದವರಾಗಿ, ಸುರೇಶ ಹೊಸಾಳ ಇವರು ಡೋಲಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಯ ವಿಳಾಸ:
ಶ್ರೀ ಬ್ರಹ್ಮಬೈದರ್ಕಳ ಗರೋಡಿ ಹೊಸಾಳ, ಬಾರ್ಕೂರು,
ಬಾರ್ಕೂರು ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ 576210.
ಬಾರ್ಕೂರು ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ 576210.
ಪಾತ್ರಿ:
ರಘು ಪೂಜಾರಿ – 9980052990.
ಮೊಕ್ತೇಸರರು:
ಗೌತಮ ಹೆಗ್ಡೆ: – 9611018893.
ಮಾಹಿತಿ ನೀಡಿದವರು :
ರಘು ಪೂಜಾರಿ
ಮಾಹಿತಿ ಸಂಗ್ರಹಿಸಿದ ದಿನಾಂಕ :
02.01.2025