Baidashree

Shree Brahma Baidarkala Garodi, Huyyaru

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಹುಯ್ಯಾರು

ಉಡುಪಿ ಬ್ರಹ್ಮಾವರ ಸೈಬ್ರಕಟ್ಟೆಯಲ್ಲಿ ಬಲಕ್ಕೆ ತಿರುಗಿ ಜಾನುವಾರು ಕಟ್ಟೆ ವಂಡಾರು ಮೂಲಕ ಹೈಕಾಡಿ ತಲುಪಿ ಅಲ್ಲಿಂದ ಸುಮಾರು ಮೂರು ಕಿ. ಮೀ. ದೂರದಲ್ಲಿದೆ ಈ ಗರೋಡಿ.
ಇದು ಆಯದ ಗರೋಡಿಯಾಗಿದ್ದು ಉತ್ತರಾಭಿಮುಖವಾದ ಒಂದು ದ್ವಾರವಿದೆ. ಬ್ರಹ್ಮಗುಡಿಯು ಪೂರ್ವಾಭಿಮುಖವಾಗಿದ್ದು, ಷಡಾಧಾರ ಪ್ರತಿಷ್ಠೆಯಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಯಿದೆ.
ಬಲಭಾಗದಲ್ಲಿ ಬಲ್ಲಾಳರ ಮುಂಡಿಗೆ, ಕುಜುಂಬ ಕಾಂಜವರ ಹಾಗೂ ಮಗುವಿನ ಮರದ ಮೂರ್ತಿ ಇದೆ.
ಬ್ರಹ್ಮಗುಡಿಯ ಹೊರಗೆ ಎಡಬದಿಯಲ್ಲಿ ಪಂಜರ್ಲಿ ದೈವದ ಮುಂಡಿಗೆಯಿದೆ. ಬಲಬದಿಯಲ್ಲಿ ಮೈಂದಾಳ್ತಿ ಮತ್ತು ಬಾಲೆಯ ಮರದ ಮೂರ್ತಿಯಿದೆ.
ಬ್ರಹ್ಮಗುಡಿಯ ಎದುರಿಗೆ ಜೋಗಿ ಪುರುಷರ ಮರದ ಮೂರ್ತಿ ಇದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಜಗುಲಿಯಲ್ಲಿ ಬಾಗಿಲ ಬೊಬ್ಬರ್ಯ, ನಂದಿಕೇಶ್ವರ ದೈವದ ಮರದ ಮೂರ್ತಿ ಹಾಗೂ ಹೈಗುಳಿ ದೈವದ ಮುಂಡಿಗೆಯಿದೆ.
ಗರೋಡಿಯ ಎದುರಿರುವ ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿ ಇದೆ.
ಗರೋಡಿಯ ಪರಿಸರದಲ್ಲಿ ಗರಡಿ ಗಣಪತಿ ದೇವಸ್ಥಾನವಿದೆ.

ಸುಧಾಕರ ಪೂಜಾರಿ

2009ರಿಂದ ಸುಧಾಕರ ಪೂಜಾರಿ (50 ವರ್ಷ) ಯವರು ಗರೋಡಿಯ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಇವರ ಹಿರಿಯರಾದ ನಾರಾಯಣ ಪೂಜಾರಿ, ಕೆಪ್ಪ ಪೂಜಾರಿಯವರು ಈ ಸೇವೆ ಮಾಡಿದ್ದರು.
ರಾಮ ಪೂಜಾರಿ (60 ವರ್ಷ) ಹಾಗೂ ನಾರಾಯಣ ಪೂಜಾರಿ (55 ವರ್ಷ) ಇವರು ಇಲ್ಲಿಯ ಬೈದರ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ.
ಈ ಗರೋಡಿಯ ಮೊಕ್ತೇಸರರಾದ ವಿಶ್ವನಾಥ ಸೇರ್ವೆಗಾರರು 2023ರಲ್ಲಿ ನಿಧನರಾಗಿದ್ದು ಅವರ ಉತ್ತರಾಧಿಕಾರಿಯ ನೇಮಕವಾಗಲಿಲ್ಲ. ಮುರಳೀಧರ ಶೆಟ್ಟಿಯವರು ಮುಕ್ಕಾಲ್ತಿಯಾಗಿದ್ದಾರೆ
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ಹೂವಿನ ಪೂಜೆ, ಪಸರಣೆ ಪೂಜೆ, ಕದಿರು ಕಟ್ಟುವುದು, ಪ್ರತೀ ವರ್ಷ ಡಿಸೆಂಬರ್ 13ನೇ ತಾರೀಖಿನಂದು ಅಗೆಲು ಸೇವೆ, ಹಾಲುಹಬ್ಬ, ದರ್ಶನ ಸೇವೆ, ತುಲಾಭಾರ ಸೇವೆ, ಮಾರ್ಚ ತಿಂಗಳ 25ನೇ ತಾರೀಖಿನಂದು ಅಗೆಲು, 26ಕ್ಕೆ ಬೈದರ್ಕಳ ನೇಮ, ಶಿವರಾಯ, ಮೈಂದಾಳ್ತಿ, ಜೋಗಿಪುರುಷ ಕೋಲ ಹಾಗೂ ಪ್ರತೀ ವರ್ಷ ಡಿಸೆಂಬರ್ ತಿಂಗಳಲ್ಲಿ ಶಿವರಾಯ ಮಾರಿ ಹಬ್ಬ ನಡೆಯುತ್ತದೆ.
ಹುಯ್ಯಾರು, 76 ಹಾಲಾಡಿ, ರಟ್ಟಾಡಿ, ತುಳಂಜೆ, 28 ಹಾಲಾಡಿ ಗ್ರಾಮಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿವೆ. ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಕಾರ್ಯಗಳ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಜನರು ಪಾಲ್ಗೊಳ್ಳುತ್ತಾರೆ.
ಗರೋಡಿಗೆ ಸಂಬಂಧಪಟ್ಟ ಒಂದು ಎಕರೆ ಸರಕಾರಿ ಜಮೀನು ಇದೆ. ಊರಜನರ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಯ ಜೀರ್ಣೋದ್ದಾರದ ಮೊದಲಿನ ಫೋಟೋ.
ಗರೋಡಿಯು 1986-87ರಲ್ಲಿ ಜೀರ್ಣೋದ್ಧಾರಗೊಂಡಿದ್ದು ನಂತರ 2023ರಲ್ಲಿ ಪುನ: ಜಿರ್ಣೋದ್ಧಾರಗೊಂಡಿದೆ.
ನರಸಿಂಹ ಪರವ ಮತ್ತು ಸಂಘಡಿಗರು ನೃತ್ಯವಿಶಾರದರಾಗಿ, ಸಂತೋಷ ಮಡಿವಾಳ ಹುಯ್ಯಾರು ಮಡಿವಾಳರಾಗಿ, ಬಾಬಣ್ಣ ಹಾಲಾಡಿ ವಾದ್ಯದವರಾಗಿ, ಪುಂಡು ನರ್ಮಣ್ಣು ಡೋಲಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ,
ಹುಯ್ಯಾರು, 76 ಹಾಲಾಡಿ,
ಹಿಲಿಯಾಣ ಅಂಚೆ ಬೈಂದೂರು ತಾಲೂಕು
ಉಡುಪಿ ಜಿಲ್ಲೆ – 526227

ಅರ್ಚಕರು:

ಸುಧಾಕರ ಪೂಜಾರಿ – 9663268584

ಮಾಹಿತಿ ನೀಡಿದವರು :

ಸುಧಾಕರ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

16.01.2025