ಶ್ರೀ ಕೋಟಿಚೆನ್ನಯ್ಯ ಪಂಜುರ್ಲಿ ಗರೋಡಿ, ನಾಕಟ್ಟೆ, ಬೈಂದೂರು
ಉಡುಪಿಯಿಂದ – ಕುಂದಾಪುರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಎನ್.ಎಚ್.66ರಲ್ಲಿ ಬೈಂದೂರು ತಲುಪಿದರೆ ಎನ್.ಎಚ್.66ರ ಎಡಬದಿಯಲ್ಲಿ ಸುಮಾರು 150ಮೀ. ದೂರದಲ್ಲಿದೆ ಈ ಗರೋಡಿ. ಉಡುಪಿ ಜಿಲ್ಲೆಯ ಉತ್ತರ ದಿಕ್ಕಿಗಿರುವ ಕೊನೆಯ ಗರೋಡಿ ಇದಾಗಿದೆ.
ಶಿಲಾಮಯವಾಗಿ ನಿರ್ಮಿಸಲಾದ ಈ ಗರೋಡಿಗೆ ಪೂರ್ವಾಭಿಮುಖವಾದ ಮುಖ್ಯ ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೊಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಮರದಿಂದ ನಿರ್ಮಿಸಲ್ಪಟ್ಟ ಬ್ರಹ್ಮಗುಂಡದ ಒಳಗೆ ನಾಗಬ್ರಹ್ಮ ಪಂಚಲೋಹದ ಮೂರ್ತಿ ಇದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು, ಇಬ್ಬರು ಮಕ್ಕಳು ಹಾಗೂ ತಾಣನಂದಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ದೇಯಿಬೈದೆತಿ, ಕುಜುಂಬ ಕಾಂಜವ, ಕುಬ್ಜಾಖಾನ್ ಹಾಗೂ ಯಕ್ಷೆಯ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಪಂಜುರ್ಲಿ ದೈವದ ಸಾನಿದ್ಯವಿದೆ. ಬ್ರಹ್ಮಗುಡಿಯ ಎಡಬದಿಯಲ್ಲಿ ಮರ್ಲಮ್ಮ, ಚಿಕ್ಕು, ಮಾಸ್ತಿ ದೈವದ ಸಾನಿದ್ಯವಿದೆ
ಪಕ್ಕದಲ್ಲಿ ಧೂಮಾವತಿ, ಮಾಯಿಂದಾಲ್, ಮಾಯಿಂದಾಲ್ ಪುತ್ರ, ಕತೃಹೈಗುಳಿ, ಸಿಂಗಾರದ ಹೈಗುಳಿ, ಮೂಡೂರ ಹೈಗುಳಿ, ಹೊರಸುತ್ತಿನ ಹೈಗುಳಿ ಜೋಗಿಪುರುಷರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದುರು ಮುಖವಾಗಿ ಗುರು ಸಂಕಲ್ಪವಾಗಿ ಗುರುಕಂಬ ಹಾಗೂ ಮುರ್ಚಂಡಿಯ ಮರದ ಮೂರ್ತಿ ಇದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯನ ಮರದ ಮೂರ್ತಿ ಇದೆ. ಇನ್ನೊಂದು ಬದಿಯಲ್ಲಿ ಹುಲಿದೇವ ಮರದ ಮೂರ್ತಿ ಇದೆ.
ಗರೋಡಿಯ ಅಂಗಣದಲ್ಲಿ ತೀರ್ಥಬಾವಿ, ತುಳಸಿಕಟ್ಟೆಗಳಿವೆ. ಪಕ್ಕದಲ್ಲಿ ಮೂಲದಲ್ಲಿ ಗರೋಡಿ ಇದ್ದ ಪ್ರತೀಕವಾಗಿ ಮರದ ಕಟ್ಟೆಯೊಂದಿದೆ. ಇಲ್ಲಿ ಇದ್ದ ಗರೋಡಿಯನ್ನು ಕಾಲಾಂತರದಲ್ಲಿ ಸ್ಥಳಾಂತರಿಸಿ ರಾಷ್ಟ್ರೀಯ ಹೆದ್ದಾರಿಯ ಪಕ್ಕ ಈಗ ಇರುವ ಸ್ವಾಗತಗೋಪುರದ ಹತ್ತಿರ ಕಟ್ಟಲಾಯಿತಂತೆ. ಅಲ್ಲಿಂದ ಪುನ: ಸ್ಥಳಾಂತರಿಸಿ ಈಗ ಇರುವ ಜಾಗದಲ್ಲಿ 2022ರಲ್ಲಿ ಶಿಲಾಮಯ ಹೊಸಗರೋಡಿಯನ್ನು ನಿರ್ಮಿಸಲಾಗಿದೆ. ಮೂಲಸ್ಥಾನದ ಪ್ರತೀಕವಾಗಿ ಆ ಸ್ಥಳದಲ್ಲಿದ್ದ ಮರಕ್ಕೆ ಕಟ್ಟೆಯನ್ನು ನಿರ್ಮಿಸಲಾಗಿದೆ.
ಗಣೇಶ ಪೂಜಾರಿ (40 ವರ್ಷ) ಇವರು ಇಲ್ಲಿಯ ಅರ್ಚಕರಾಗಿದ್ದಾರರ. ಇವರ ಮೊದಲು ಇವರ ಅಜ್ಜ ನಂದು ಪೂಜಾರಿಯವರು ಅರ್ಚಕರಾಗಿದ್ದರು.
ಗರೋಡಿಯ ಆಡಳಿತವನ್ನು ಕೋಟಿಚೆನ್ನಯ್ಯ ಪಂಜುರ್ಲಿ ಟ್ರಸ್ಟ್ ಎಂಬ ಹೆಸರಿನ ಟ್ರಸ್ಟ್ ನೋಡಿಕೊಳ್ಳುತ್ತಿದ್ದು, ರಾಜು ಪೂಜಾರಿಯವರು ಟ್ರಸ್ಟ್ನ ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ನಿತ್ಯ ದೀಪ ಹಚ್ಚುತ್ತಾರೆ. ಸೋಮವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಬೆಳಕಿನ ಸೇವೆ, ಕದಿರು ಕಟ್ಟುವ ಕ್ರಮ ಇದೆ.
ಪ್ರತೀ ವರ್ಷ ಜನವರಿ 25ನೇ ತಾರೀಖಿಗೆ ಅಗೆಲು, ಬೈದರ್ಕಳ ಕೋಲ ನಡೆದು, 26ಕ್ಕೆ ಪಂಜುರ್ಲಿ ಹಾಗೂ ಧೂಮಾವತಿ ಕೋಲ ನಡೆಯುತ್ತದೆ.
ಬೈಂದೂರು, ಶೀರೂರು, ಕಳವಾಡಿ, ತಗ್ಗರ್ಸೆ, ಉಪ್ಪುಂದ, ಯೆಡ್ತರೆ, ಮುಡಿಕಲ್ಲು ಭಾಗದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ.
ಗರೋಡಿಯ ವಿಳಾಸ:
ಶ್ರೀ ಕೋಟಿಚೆನ್ನಯ್ಯ ಪಂಜುರ್ಲಿ ಗರೋಡಿ ನಾಕಟ್ಟೆ,
ಬೈಂದೂರು ಯೆಡ್ತರೆ ಅಂಚೆ,
ಬೈಂದೂರು ತಾಲೂಕು
ಉಡುಪಿ ಜಿಲ್ಲೆ – 576214.
ಬೈಂದೂರು ಯೆಡ್ತರೆ ಅಂಚೆ,
ಬೈಂದೂರು ತಾಲೂಕು
ಉಡುಪಿ ಜಿಲ್ಲೆ – 576214.
ಅರ್ಚಕರು:
ಗಣೇಶ ಪೂಜಾರಿ – 9980479952
ಟ್ರಸ್ಟ್ನ ಅಧ್ಯಕ್ಷರು :
ರಾಜು ಪೂಜಾರಿ – 9448344534.
ಮಾಹಿತಿ ನೀಡಿದವರು :
ಅಣ್ಣಪ್ಪ ಪೂಜಾರಿ – 94488 57516
ಮಾಹಿತಿ ಸಂಗ್ರಹಿಸಿದ ದಿನಾಂಕ :
26.02.2025