Baidashree

Shree Brahma Baidarkala Garodi, Kallugudde

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಲ್ಲುಗುಡ್ಡೆ

ಉಡುಪಿಯಿಂದ ಕಾಪು ಶಿರ್ವ ರಸ್ತೆಯಲ್ಲಿ ಮಜೂರಿನ ನಂತರ ಎಡಕ್ಕೆ ತಿರುಗಿ ಕಲ್ಲುಗುಡ್ಡೆ ರಸ್ತೆಯಲ್ಲಿ 1.5ಕಿ.ಮೀ. ಸಾಗಿದರೆ ರಸ್ತೆಯ ಎಡಬದಿಯಲ್ಲಿ ಕಲ್ಲುಗುಡ್ಡೆ ಗರೋಡಿ ಇದೆ.
ಇದು ಆಯದ ಗರೋಡಿ. ಮುಖ್ಯ ದ್ವಾರವು ಪೂರ್ವಾಭಿಮುಖವಾಗಿಯೂ, ಇನ್ನೊಂದು ದ್ವಾರವು ಪಶ್ಚಿಮಾಭಿಮುಖವಗಿಯೂ ಇದೆ. ಗರೋಡಿಯು ಷಡಾಧಾರ ಪ್ರತಿಷ್ಠೆಯಲ್ಲಿದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಕಲ್ಲುಗುಡ್ಡೆಯ ಅನಂತ ಬಲ್ಲಾಳ ಎಂಬ ಜೈನ ವಂಶಸ್ಥರು ಕೇಂಜದಲ್ಲಿ ಗರೋಡಿ ಕಟ್ಟುವಾಗ ವಿವಾದ ಬಂದುದರಿಂದಾಗಿ ಕಲ್ಲುಗುಡ್ಡೆಯಲ್ಲಿಯೇ ಗರೋಡಿ ಸ್ಥಾಪಿಸಿದರಂತೆ. ಕೇಂಜದಲ್ಲಿ ಜಗಳವಾಡಿ ಬಂದುದರಿಂದ ಬೈದೇರುಗಳು ಅವರ ಬೆನ್ನು ಬಿಡದೆ ಈ ಗರೋಡಿ ಸ್ಥಾಪನೆ ಮಾಡಿಸಿದರೆಂಬುದು ಪ್ರತೀತಿ.
ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಅಶ್ವಾರೂಢ ಬ್ರಹ್ಮರ ಬೆಳ್ಳಿ ಮುಚ್ಚಿದ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿ ದೇವರ ಆರಾಧನೆ ಇದೆ. ಗುಂಡದ ಎಡಭಾಗದಲ್ಲಿ ಉಯ್ಯಾಲೆಯಲ್ಲಿ ಕೋಟಿಚೆನ್ನಯರಿಗೂ ಬಲಬಾಗದಲ್ಲಿ ಮಣೆ ಮಂಚದಲ್ಲಿ ಒಕ್ಕು ಬಲ್ಲಾಳ ಹಾಗೂ ಕುಜುಂಬ ಕಾಂಜವರಿಗೂ ಪೂಜೆ ಸಲ್ಲುತ್ತದೆ. ಬ್ರಹ್ಮ ಗುಡಿಯ ಹೊರಗೆ ಎಡಭಾಗದಲ್ಲಿ ಮಣೆ ಮಂಚದಲ್ಲಿ ಜಾರಂದಾಯ ಹಾಗೂ ಕೊಡಮಣಿತ್ತಾಯ ದೈವಗಳಿಗೂ ಬಲಭಾಗದಲ್ಲಿ ಮಣೆ ಮಂಚದಲ್ಲಿ ಜೋಗಿ ಪುರುಷ, ಪಿಲ್ಚಂಡಿ ದೈವಗಳಿಗೂ ಪೂಜೆ ನಡೆಯುತ್ತದೆ. ಗುಂಡದ ಗರೋಡಿಯ ಒಳಗೆ ಬಡಗು ದಿಕ್ಕಿನಲ್ಲಿ ಗುರು ಕಂಬವಿದೆ.
ಗರೋಡಿಯ ಹೊರಾಂಗಣದಲ್ಲಿ ಗುಡಿಯೊಳಗೆ ಮಾಯಂದಾಲ್ ಹಾಗೂ ಮಗುವಿನ ಮರದ ಪಾಪೆ ಇದೆ. ಅಯ್ಯಕಲ್ಲು , ತುಳಸೀಕಟ್ಟೆ, ಹಾಗೂ ದೀಪದ ಕಂಬಗಲೂ ಇವೆ.
ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬ್ರಹ್ಮಸ್ಥಾನವೂ ಇದೆ.
ಗರಡಿ ಮನೆ ದಿನೇಶ್ ಪೂಜಾರಿ (50 ವರ್ಷ ಪ್ರಾಯ) ಇವರು ಇಲ್ಲಿಯ ಪೂ ಪೂಜನೆಯವರಾಗಿದ್ದಾರೆ. ಇವರಿಗಿಂತ ಮೊದಲು ಹಿರಿಯರಾದ ಶಿವರಾಮ ಪೂಜಾರಿ, ಹಿರಿಯಣ್ಣ ಪೂಜಾರಿ ಪೂ ಪೂಜನೆಯ ಸೇವೆ ಮಾಡಿದ್ದರು.

ಚಂದ್ರ ಕಾಂತ ಪೂಜಾರಿ

ಚಂದ್ರ ಕಾಂತ ಪೂಜಾರಿ(67 ವರ್ಷ ಪ್ರಾಯ) ಇವರು ಇಲ್ಲಿಯ ಬೈದೇರುಗಳ ದರ್ಶನದ ಸ್ಥಳ ಪಾತ್ರಿ. ಕಲ್ಲುಗುಡ್ಡೆ ಬರ್ಕೆಮನೆ ವಸಂತ ಶೆಟ್ಟಿ ಹಾಗೂ ಬರ್ಪಾಣಿ ಸುಧೀರ್ ಶೆಟ್ಟಿ ಇವರುಗಳು ಇಲ್ಲಿಯ ಮೊಕ್ತೇಸರರು.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, (ಸೂಡ) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರ ಕಟ್ಟುವುದು, ಪುಯಿಂತೆಲ್(ಜನವರಿ – ಫೆಬ್ರವರಿ) ತಿಂಗಳಲ್ಲಿ ಪ್ರತಿ ವರ್ಷವೂ ಅಗೆಲ್ ಸೇವೆ, ಬೈದೇರುಗಳ ನೇಮೋತ್ಸವ, ಜೋಗಿ ಪುರುಷ, ಮಾಯಂದಾಲ್ ಕೋಲ ಹಾಗೂ ಶುದ್ದದ ಅಗೆಲ್ ಸೇವೆ ನಡೆಯುತ್ತದೆ. ಊರವರ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಎಲ್ಲಾ ಕಾರ್ಯಗಳ ವೆಚ್ಚವನ್ನು ಭರಿಸಲಾಗುತ್ತಿದೆ.
ಕಲ್ಲುಗುಡ್ಡೆ, ಹೇರೂರು, ಪಾದೂರು, (ಭಾಗಶಃ ಕರಂದಾಡಿ, ಮುಡುಂಬು, ಉಂಡಾರು ಗ್ರಾಮದ ಜನರು ಈ ಗರೋಡಿಯ ಕೂಡು ಕಟ್ಟಿಗೆ ಸೇರಿದವರಾಗಿದ್ದಾರೆ. ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಣಿಕೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ, ಮುಂತಾದ ಹರಕೆ ಸೇವೆಗಳಲ್ಲಿ ಕೂಡು ಕಟ್ಟಿಗೆ ಸೇರಿದ ಜನರು ಭಾಗಿಯಾಗುತ್ತಾರೆ.
ಇತ್ತೀಚೆಗೆ 22-01-2011ರಲ್ಲಿ ಈ ಗರೋಡಿಯು ಜೀರ್ಣೋದ್ಧಾರಗೊಂಡಿದ್ದು ಹಿಂದೆ 1981ರಲ್ಲಿ ಜೀರ್ಣೋದ್ಧಾರವಾಗಿದೆ.
ಗರೋಡಿಯ ನೃತ್ಯ ವಿಶಾರದರಾಗಿ ಬೊಗ್ಗು ಪರವ ಮೂಡುಬೆಳ್ಳೆ, ಮಡಿವಾಳರಾಗಿ ಸುನೀಲ್ ಮಡಿವಾಳ ಕೊಮಬಗುಡ್ಡೆ, ವಾದ್ಯದವರಾಗಿ ಶೇಖರ ಸೇರಿಗಾರ ಬೆಳಿಯಾಲು, ಇವರುಗಳು ಸೇವೆ ಮಾಡುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟ “ಶ್ರೀ ಬ್ರಹ್ಮ ಬೈದರ್ಕಳ ಕಲಾ ಸಂಘ‘’ ಎಂಬ ಸಂಘ ಕಾರ್ಯನಿರ್ವಹಿಸುತ್ತಿದ್ದು, ಚಂದ್ರಕಾಂತ ಪೂಜಾರಿಯವರು ಅದ್ಯಕ್ಷರಾಗಿದ್ದಾರೆ. ಅರವಿಂದ ಕಲ್ಲುಗುಡ್ಡೆ ಹಾಗೂ ರಮಾನಂದ ಇವರುಗಳು ಕರ್ಯದರ್ಶಿಗಳಾಗಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ,
ಕಲ್ಲುಗುಡ್ಡೆ ಗ್ರಾಮ, 92ನೇ ಹೇರೂರು,
ಬಂಟಕಲ್ಲು ಅಂಚೆ, ಕಾಪು ತಾಲೂಕು,
ಉಡುಪಿ. 574115.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ,
ಕಲ್ಲುಗುಡ್ಡೆ ಗ್ರಾಮ, 92ನೇ ಹೇರೂರು,
ಬಂಟಕಲ್ಲು ಅಂಚೆ, ಕಾಪು ತಾಲೂಕು,
ಉಡುಪಿ. 574115.

ಮಾಹಿತಿ ಸಂಗ್ರಹಿಸಿದ ದಿನಾಂಕ:

22-11-2024