Baidashree

Shree Brahma Baidarkala Garodi Kshetra, Sastana (Goligarodi)

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕ್ಷೇತ್ರ, ಸಾಸ್ತಾನ (ಗೋಳಿಗರೋಡಿ)

ಉಡುಪಿಯಿಂದ ಸಾಸ್ತಾನ ತಲುಪಿ, ಸಾಸ್ತಾನ ಪೇಟೆಯಲ್ಲಿ ಬಲಕ್ಕಿರುವ ಗರೋಡಿ ರಸ್ತೆಯಲ್ಲಿದೆ ಈ ಗರೋಡಿ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಈ ಸ್ಥಳದಲ್ಲಿ ಪೂರ್ವಕಾಲದಿಂದಲೂ ಒಂದು ಬ್ರಹತ್ತಾದ ಆಲದ ಮರ (ಗೋಳಿ ಮರ) ಇತ್ತಂತೆ. ಆ ಮರದಲ್ಲಿ ಕೋಟಿಚೆನ್ನಯರು ಶಕ್ತಿ ರೂಪದಲ್ಲಿ ಬಂದು ನೆಲೆಸಿದ್ದರಂತೆ. ಈ ಸ್ಥಳಕ್ಕೆ ಧರ್ಮಸ್ಥಳದಿಂದ ಅಣ್ಣಪ್ಪ ಪಂಜುರ್ಲಿಯ ದೃಷ್ಠಿ ಬಿದ್ದ ಕಾರಣ ಇಲ್ಲಿ ಗರೋಡಿಯ ಸ್ಥಾಪನೆಯಾಯಿತಂತೆ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ. ಷಢಾಧಾರ ಪ್ರತಿಷ್ಟೆಯೂ ಇದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಬೆಳ್ಳಿಯ ಕವಚದ ಮೂರ್ತಿಯಿದೆ.
ಗುಂಡದ ಹೊರಗೆ ಎಡಭಾಗದಲ್ಲಿ ಕೋಟಿಚೆನ್ನಯರು, ಇಬ್ಬರು ಮಕ್ಕಳು ಹಾಗೂ ದೇಯಿಬೈದೆತಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿ, ನಂದಿಕೇಶ್ವರ ದೈವದ ಮಣೆಮಂಚದಲ್ಲಿ ಪಂಚಲೋಹದ ಮೂರ್ತಿ, ಮಲ್ಲಕೇಶ್ವರ ಹಾಗೂ ಪರಿವಾರ ದೈವಗಳ ಗದ್ದಿಗೆಗಳಿವೆ.
ಬ್ರಹ್ಮ ಗುಡಿಯ ಹೊರಗೆ ಬ್ರಹ್ಮಗುಡಿಯ ಬಲಭಾಗದಲ್ಲಿ ಪರಿವಾರ ದೈವಗಳ ಎರಡು ಗದ್ದಿಗೆಗಳು, ಅಮ್ಮನವರು, ಹೈಗುಳಿ, ದೈವಗಳ ಗದ್ದಿಗೆಗಳಿವೆ. ಎಡಭಾಗದಲ್ಲಿ ಪಂಜುರ್ಲಿಯ ಗದ್ದಿಗೆಯಲ್ಲಿ ಬೆಳ್ಳಿಮುಚ್ಚಿದ ಪಂಚಲೋಹದ ಮೂರ್ತಿಯಿದೆ. ಪಕ್ಕದಲ್ಲಿ ಪಂಜುರ್ಲಿ ಬಂಡಿ ಇದೆ.
ಹತ್ತಿರದಲ್ಲಿ ಎರಡು ಮಣೆಮಂಚಗಳಲ್ಲಿ ಪರಿವಾರ ದೈವಗಳು, ಕಾಲಬೈರವನ ಮರದಮೂರ್ತಿ, ಪರಿವಾರ ದೈವದ ಮರದ ಮೂರ್ತಿ ಹಾಗೂ ಗದ್ದಿಗೆ, ಮೈಂದಾಳ್ತಿ ಮತ್ತು ಮಗುವಿನ ಮರದ ಮೂರ್ತಿ, ಮಂತ್ರಗಣ ಮತ್ತು ಕಲ್ಕುಡನ ಗದ್ದಿಗೆಗಳು ಇವೆ.
ಬ್ರಹ್ಮಗುಡಿಯ ಎದುರಿಗೆ ಪರಿವಾರ ದೈವದ ಗದ್ದಿಗೆ, ಜೋಗಿ ಪುರುಷ ಹಾಗೂ ಕುದುರೆಯ ಮರದ ಮೂರ್ತಿ, ಚೌಂಡೇಶ್ವರ, ಸಾಹೇಬರ ಗಣಗಳ ಮರದ ಮೂರ್ತಿ, ಗುರು ಕಂಬ, ಚಿಕ್ಕಮ್ಮ ಹಾಗೂ ಮರ್ಲು ಚಿಕ್ಕಮ್ಮರ ಮರದ ಮೂರ್ತಿ, ಪರಿವಾರ ದೈವದ ಗದ್ದುಗೆ, ಹೈಗುಳಿ ಗದ್ದಿಗೆ ಹಾಗೂ ಪರಿವಾರ ದೈವಗಳ ಮೂರು ಗದ್ದುಗೆಗಳಿವೆ.
ಗರೋಡಿಯ ಹೊರ ಬಾಗಿಲ ಹತ್ತಿರ ಬಾಗಿಲು ಬೊಬ್ಬರ್ಯ ಹಾಗೂ ದ್ವಾರಪಾಲಕರ ಮರದ ಮೂರ್ತಿಗಳಿವೆ.
ಗರೋಡಿಯ ಎದುರಿಗೆ ಇರುವ ಗುಡಿಯಲ್ಲಿ ಶಿವರಾಯ, ಬಂಟ ಹಾಗು ವ್ಯಾಘ್ರಚಾಮುಂಡೇಶ್ವರಿಯ ಮರದ ಮೂರ್ತಿಗಳಿವೆ.
ಗರೋಡಿಯ ಎದುರಿಗೆ ಆವರಣದೊಳಗೆ ದೀಪದ ಕಂಬ, ತೊಟ್ಟಿಲ ಮಗುವಿನ ಕಲ್ಲು, ಪ್ರೇತ ಶಿಲೆ, ಯಕ್ಷೇಶ್ವರಿಯ ಕಲ್ಲಿನ ಗದ್ದುಗೆ, ಕ್ಷೇತ್ರಪಾಲ ದೈವದ ಮರದ ಗದ್ದಿಗೆಗಳಿವೆ.
ಗರೋಡಿಯ ಪಕ್ಕದಲ್ಲಿರುವ ಗುಡಿಯಲ್ಲಿ ಕೊರಗ ಪೂಜಾರಿ, ಚಂದು ಪೂಜಾರಿಯವರ ಮರದ ಮೂರ್ತಿ, ಶಾಂತಾ ಬಾಯಿಯ ಮರದ ಗದ್ದಿಗೆ ಹಾಗೂ ಎರಡು ಹೆಣ್ಣು ಭೂತಗಳ ಕಲ್ಲುಗಳಿವೆ. ಗರೋಡಿಯ ಪರಿಸರದಲ್ಲಿ ನಾಗಬನ, ಬಲಿಕಲ್ಲುಗಳಿವೆ.

ದಿನಕರ ಪೂಜಾರಿ

1987ರಿಂದ ದಿನಕರ ಪೂಜಾರಿ ( 65 ವರ್ಷ) ಯವರು ಅರ್ಚಕರಾಗಿದ್ದಾರೆ. ಇವರೊಂದಿಗೆ ಶೀನ ಪೂಜಾರಿ (60 ವರ್ಷ) ಕರಿಯ ಪೂಜಾರಿ, ಬಸವ ಪೂಜಾರಿ, ಹರೀಶ ಪೂಜಾರಿಯವರು ಇಲ್ಲಿಯ ಅರ್ಚಕರಗಿದ್ದಾರೆ. ಇವರ ಮೊದಲು ಕೃಷ್ಣಯ್ಯ ಪೂಜಾರಿ, ಗಿರಿಯ ಪೂಜಾರಿ, ರಂಗ ಪೂಜಾರಿ, ಚಂದು ಪೂಜಾರಿ, ಸೋಮ ಪೂಜಾರಿ ತೌಡ ಪೂಜಾರಿಯವರು ಈ ಸೇವೆ ಮಾಡಿದ್ದರು.

ಶಂಕರ ಪೂಜಾರಿ

1987ರಿಂದ ಶಂಕರ ಪೂಜಾರಿ (64 ವರ್ಷ)ಯವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರ ಮೊದಲು ಚಂದು ಪೂಜಾರಿ, ಕೊರಗ ಪೂಜಾರಿ, ಕೃಷ್ಣಯ್ಯ ಪೂಜಾರಿ, ಸದಿಯ ಪೂಜಾರಿ, ಇವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದರು.
ಬಾಳಕುದ್ರು ಹೆಗ್ಡೆಯವರ ಮನೆ ಬಿ.ಸುಧಾಕರ ಶೆಟ್ಟಿಯವರು ಇಲ್ಲಿಯ ಮೊಕ್ತೇಸರರು. ಇವರ ಮೊದಲು ಸಂಕಯ್ಯ ಹೆಗಡೆ, ಕೃಷ್ಣಯ್ಯ ಹೆಗಡೆಯವರು ಮೊಕ್ತೇಸರರಾಗಿದ್ದರು.

ಜಿ. ವಿಠಲ ಪೂಜಾರಿ

ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು, ಜಿ. ವಿಠಲ ಪೂಜಾರಿಯವರು ಇದರ ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, (ಪೆರ್ಡೂರು) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಪಂಜುರ್ಲಿಗೆ ಭೋಗ ಸೇವೆ, ನವಂಬರ್ ತಿಂಗಳಲ್ಲಿ ಅಗೆಲು ಸೇವೆ, ಹಾಲುಹಬ್ಬ, ದರ್ಶನ ಸೇವೆ ನಡೆಯುತ್ತದೆ. ಫೆಬ್ರವರಿ ತಿಂಗಳ 22ನೇ ತಾರೀಖಿನಂದು ಗೆಂಡ ಸೇವೆ, 23ಕ್ಕೆ ತುಲಾಭಾರ ಹಾಗೂ ಮಾರಿಹಬ್ಬವು 10 ವರ್ಷಕ್ಕೊಮ್ಮೆ ನಡೆಯುತ್ತದೆ.
ಪಾಂಡೇಶ್ವರ, ಮೂಡೋಡು, ಐರೋಡಿ, ಗುಂಡ್ಮಿ, ವಾರಂಬಳ್ಳಿ, ಹಂದಟ್ಟು, ಬಾಳಕುದ್ರು, ಹಂಗಾರಕಟ್ಟೆ, ಕೋಡಿ, ಪಾರಂಪಳ್ಳಿ ಹಾಗೂ ಎಡಬೆಟ್ಟು ಗ್ರಾಮದ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರು. ಊರ ಜನರು ಗರೋಡಿಯಲ್ಲಿ ನೀರುಸ್ನಾನ, ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಪರವೂರ ಭಕ್ತರ ವಂತಿಗೆ, ಕಾಣಿಕೆ, ದೇಣಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತದೆ.
ಗರೋಡಿಯು 1977 ಹಾಗೂ 2018ರಲ್ಲಿ ಜೀರ್ಣೋದ್ದಾರವಾಗಿದೆ.
ಜಯ ಮಡಿವಾಳ ಪಾಂಡೇಶ್ವರ ಇವರು ಈ ಗರೋಡಿಯ ಮಡಿವಾಳರಾಗಿ, ರಾಮ ದೇವಾಡಿಗ ಕಾರ್ಕಡ ಇವರು ವಾದ್ಯದವರಾಗಿ ಸೇವೆ ಮಾಡುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟ ಶ್ರೀ ಪಂಜುರ್ಲಿ ಕೃಪಾ ಪೋಷಿತ ಯಕ್ಷಗಾನ ಕಲಾ ಮಂಡಳಿ (ರಿ) ಹಾಗೂ ಬ್ರಹ್ಮ ಬೈದರ್ಕಳ ಭಜನಾ ಮಂಡಳಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗೋಳಿ ಗರಡಿ ಕ್ಷೇತ್ರ ಸಾಸ್ಥಾನ,
ಸಾಸ್ತಾನ ಅಂಚೆ, ಬ್ರಹ್ಮಾವರ ತಾಲೂಕು.
ಉಡುಪಿ 576276,

ಅರ್ಚಕರು:

ದಿನಕರ ಪೂಜಾರಿ – 9886587191

ಸ್ಥಳ ಪಾತ್ರಿಗಳು:

ಶಂಕರ ಪೂಜಾರಿ – 9611387821,

ಆಡಳಿತ ಸಮಿತಿ ಅಧ್ಯಕ್ಷರು:

ಜಿ. ವಿಠಲ ಪೂಜಾರಿ -9682302071

ಮೊಕ್ತೇಸರರು:

ಬಿ.ಸುಧಾಕರ ಶೆಟ್ಟಿ – 8971816220

ಮಾಹಿತಿ ನೀಡಿದವರು :

ಶಂಕರ ಪೂಜಾರಿ, ಜಿ. ವಿಠಲ ಪೂಜಾರಿ, ದಿನಕರ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

04.01.2025