Baidashree

Shree Brahma Baidarkala Shivaraya Parivara Garodi, Haradi, Bokkapatna, Honnala

ಶ್ರೀ ಬ್ರಹ್ಮಬೈದರ್ಕಳ ಶಿವರಾಯ ಪರಿವಾರ ಗರೋಡಿ ಹಾರಾಡಿ, ಬೊಕ್ಕಪಟ್ನ ಹೊನ್ನಾಳ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್ಎಚ್ 66ರಲ್ಲಿ ಬ್ರಹ್ಮಾವರಕ್ಕೆ ಮೊದಲು ದೂಪದಕಟ್ಟೆ ಜಂಕ್ಷನ್ನಿಂದ ಎಡಕ್ಕೆ ತಿರುಗಿ ಹೊನ್ನಾಳಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು 4.1ಕಿ.ಮೀ ದೂರದಲ್ಲಿದೆ ಈ ಗರೋಡಿ.
ಇದು ಆಯದ ಗರೋಡಿಯಾಗಿದ್ದು, ಪೂರ್ವಾಭಿಮುಖವಾದ ಒಂದು ದ್ವಾರವಿದೆ. ಬ್ರಹ್ಮ ಗುಡಿಯು ಬಡಗು ಮುಖವಾಗಿದೆ. ಇಲ್ಲಿ ಷಢಾಧಾರ ಪ್ರತಿಷ್ಠೆಯಾಗಿಲ್ಲ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ನಾಗ ಬ್ರಹ್ಮರ ಪಂಚಲೋಹದ ಬೆಳ್ಳಿಯ ಕವಚ ಹಾಗೂ ಮುಖಕ್ಕೆ ಬಂಗಾರದ ಕವಚವಿರುವ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರು ಮತ್ತು ಇಬ್ಬರು ಮಕ್ಕಳ ಮರದ ಮೂರ್ತಿಯಿದೆ.
ಗುಂಡದ ಬಲಭಾಗದಲ್ಲಿ ಕುದುರೆಯ ಮೇಲೆ ಕುಳಿತ ಒಕ್ಕು ಬಲ್ಲಾಳ ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿಯಿದೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಜಾರಂದಾಯ ಹಾಗೂ ಕುಕ್ಕಿನಂತಾಯ ದೈವಗಳ ಮಣೆಮಂಚಗಳಿವೆ. ಎಡಭಾಗದಲ್ಲಿ ಪಂಜುರ್ಲಿಯ ಮಣೆ ಮಂಚ, ಜುಮಾದಿ, ಮೈಂದಾಳ್ತಿ ಮತ್ತು ಮಗುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎದುರಿಗೆ ಜೋಗಿಪುರುಷರ ಮರದ ಮೂರ್ತಿ, ಗುರುಕಂಬ, ಚಿಕ್ಕಮ್ಮನ ಮರದ ಮೂರ್ತಿ, ಹೈಗುಳಿ ದೈವದ ಮಣೆಮಂಚದಲ್ಲಿ ಪಂಚಲೋಹದ ಮೂರ್ತಿ ಇದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಜಗುಲಿಯಲ್ಲಿ ಬಾಗಿಲ ಬೊಬ್ಬರ್ಯನ ಮೂರ್ತಿ ಇದೆ. ಪಕ್ಕದಲ್ಲಿಯೇ ಹಳೆಯ ಶಿಲಾಶಾಸನವೊಂದಿದೆ.
ಗರೋಡಿಯ ಎದುರಿನ ಶಿವರಾಯ ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿಯಿದೆ.
ಗರೋಡಿಯ ಬಲಭಾಗದಲ್ಲಿರುವ ಇನ್ನೊಂದು ಗುಡಿಯಲ್ಲಿ ವರ್ತೆ, ಪಂಜುರ್ಲಿ, ಹಾಗೂ ಬೈಕಾಡ್ತಿ ದೈವಗಳಿವೆ.
ಗರೋಡಿಯ ಆವರಣದೊಳಗೆ ತುಳಸಿಕಟ್ಟೆ, ಕ್ಷೇತ್ರಪಾಲ ಗುಡಿ, ನೆಲ್ಲಿಕಾಯಿ ಮರದ ಕಟ್ಡೆ, ಬಲಿಕಲ್ಲುಗಳಿವೆ.
ಗರೋಡಿಯ ಹೊರ ಭಾಗದಲ್ಲಿ ತನ್ನಮಾನಿಗ ದೈವದ ಕಲ್ಲು ಇದೆ.

ಸದಾಶಿವ ಪೂಜಾರಿ

2021ರಿಂದ ಸದಾಶಿವ ಪೂಜಾರಿ (52 ವರ್ಷ) ಯವರು ಇಲ್ಲಿಯ ಅರ್ಚಕರಾಗಿದ್ದಾರೆ. ಇವರ ಮೊದಲು ರಾಮ ಪೂಜಾರಿ, ಜಬ್ಬ ಪೂಜಾರಿ, ಗೋವಿಂದ ಪೂಜಾರಿಯವರು ಇಲ್ಲಿಯ ಅರ್ಚಕ ಸೇವೆ ಮಾಡಿದ್ದರು.
ಈ ಗರೋಡಿಯಲ್ಲಿ ಈಗ ಬೈದರ ದರ್ಶನದ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಕುಂರ್ಬಿಲ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಯಾಗಿದ್ದರು.
ನಾರಾಯಣ ಶೆಟ್ಟಿ ಪಡು ಹಾರಾಡಿ ಇವರು ಇಲ್ಲಿಯ ಮೊಕ್ತೇಸರರಾಗಿದ್ದಾರೆ. ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು ಉದಯ ಪೂಜಾರಿಯವರು ಅದ್ಯಕ್ಷರಾಗಿ, ಪ್ರದೀಪ ಇವರು ಕಾರ್ಯದರ್ಶಿಯಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ (ಪೆರ್ಡೂರು) ಚೌತಿ ಪೂಜೆ, ಅಷ್ಟಮಿ ಪೂಜೆ, ಹಸರಣೆ ಪೂಜೆ, ಕದಿರುಕಟ್ಟುವುದು, ಕೊಡಿ ತಿಂಗಳಲ್ಲಿ ಅಗೆಲು ಸೇವೆ, ಹಾಲುಹಬ್ಬ, ದರ್ಶನ ಸೇವೆ, ತುಲಾಭಾರ ಸೇವೆಗಳು ನಡೆಯುತ್ತವೆ. ಏಪ್ರಿಲ್ ತಿಂಗಳ 6ನೇ ತಾರೀಖಿಗೆ ಅಗೆಲು, ದರ್ಶನ ಸೇವೆ, 7ಕ್ಕೆ ಬೈದೇರುಗಳ ನೇಮ, ಮೈಂದಾಳ್ತಿ ಕೋಲ, ಜೋಗಿ ಪುರುಷ ಕೋಲ, ಶಿವರಾಯ ಕೋಲಗಳು ನಡೆಯುತ್ತವೆ.
ಹಾರಾಡಿ, ಬೊಕ್ಕಪಟ್ನ, ಕುಕ್ಕುಡೆ, ಬೈಕಾಡಿ, ಸೂಲ್ ಕುದ್ರು, ಬೆಂಗ್ರೆ ಗ್ರಾಮದ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಾಗಿದ್ದು ಗರೋಡಿಯಲ್ಲಿ ನೀರು ಸ್ನಾನ, ತುಲಾಭಾರ ಸೇವೆ, ಮದುವೆ ಮುಂತಾದ ಸಂದಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಊರ ಜನರ ವಂತಿಗೆ, ಕಾಣಿಕೆ ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ಖರ್ಚು ವೆಚ್ಚ ಭರಿಸಲಾಗುತ್ತಿದೆ.
1980, 2004 ಹಾಗೂ 2019ರಲ್ಲಿ ಗರೋಡಿಯ ಜೀರ್ಣೋದ್ದಾರವಗಿದೆ.
ಸಂತು ಪರವ ಬೈಲೂರು ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ, ಬಾಲಕೃಷ್ಣ ಮಡಿವಾಳ ಹಾರಾಡಿ ಇವರು ಮಡಿವಾಳರಾಗಿ, ಪ್ರಭಾಕರ ದೇವಾಡಿಗ ನೀಲಾವರ ವಾದ್ಯದವರಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ – ಶಿವರಾಯ ಪರಿವಾರ ಗರೋಡಿ,
ಹಾರಾಡಿ ಬೊಕ್ಕಪಟ್ನ,
ಹೊನ್ನಾಳ ಪೋಸ್ಟ,
ಬ್ರಹ್ಮಾವರ ತಾಲೂಕು,
ಉಡುಪಿ 576213.

ಅರ್ಚಕರು:

ಸದಾಶಿವ ಪೂಜಾರಿ 9481344691

ಆಡಳಿತ ಸಮಿತಿ:

ಅಧ್ಯಕ್ಷರು: ಉದಯ ಪೂಜಾರಿ 9483709715

ಮಾಹಿತಿ ನೀಡಿದವರು :

ಸದಾಶಿವ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

04.01.2025