ಸಪರಿವಾರ ಅರ್ಭಕ ಧಾರೇಶ್ವರೀ ಸಹಿತ ಶ್ರೀ ಬ್ರಹ್ಮಬೈದರ್ಕಳ ಗರೋಡಿ ನಾಯರ ಬೆಟ್ಟು.ಶೀರೂರು ಮುದ್ದುಮನೆ
ಉಡುಪಿಯಿಂದ ಶೀರೂರು ಮೂರುಕೈ ತಲುಪಿ ಮೂರುಕೈ ಜಂಕ್ಷನ್ ನಿಂದ 300ಮೀ. ದೂರದಲ್ಲಿ ಬಲಕ್ಕೆ ತಿರುಗಿ ಸುಮಾರು 3.03 ಕಿ.ಮೀ. ದೂರದಲ್ಲಿ ರಸ್ತೆಯ ಬಲಭಾಗದಲ್ಲಿದೆ ಈ ಗರೋಡಿ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಈ ಗರೋಡಿಯು ಸಾಸ್ತಾನದ ಗೋಳಿಗರೋಡಿ ಸ್ಥಾಪನೆಯಾದ ಅನಂತರ ಸ್ಥಾಪನೆಯಾಯಿತಂತೆ. ಇಲ್ಲಿ ಪಂಜುರ್ಲಿ ದೈವವು ಪ್ರಾಮುಖ್ಯ ಪಡೆದಿದೆ. ಹೊಳೆಯ ಮಾರ್ಗವಾಗಿ ಗೋಳಿ ಗರೋಡಿಯಿಂದ ಈ ಊರಿಗೆ ಬಂದ ಪಂಜುರ್ಲಿಯ ಪ್ರಭಾವದಿಂದ ಇಲ್ಲಿ ಗರೋಡಿ ಸ್ಥಾಪನೆಯಾಗಿ ಎಲ್ಲಾ ದೈವಗಳನ್ನು ಮಣೆ ಮಂಚದಲ್ಲಿ ಪೂಜಿಸುತ್ತಿದ್ದರಂತೆ. ಮುಂದೆ ಗರೋಡಿ ಮನೆಯವರಿಗೆ ವಿವಾದ ಬಂದು ಒಂದು ಕಡೆಯವರು ಮಣೆಮಂಚಗಳನ್ನು ಹೊಳೆಗೆ ಬಿಸಾಡಿದರಂತೆ. ಗರೋಡಿ ಪೂಜಾರಿಯು ಹೊಳೆಗೆ ಸ್ಥಾನಕ್ಕೆಂದು ಹೋದಾಗ ಅಲ್ಲಿ ಮಣೆಮಂಚಗಳನ್ನು ಕಂಡು ಗಾಬರಿಗೊಂಡು ಆಗಿನ ಮೊಕ್ತೇಸರರನ್ನು ಹೊಳೆ ಬದಿಗೆ ಕರೆಸಿದರು. ಹೊಳೆಗೆ ಇಳಿದಾಗ ಅವರಿಗೆ ಮಣೆಮಂಚವು ನೀರಿನಲ್ಲಿ ಮೂರು ಸುತ್ತು ಬಂದಿತಂತೆ. ಮನೆಗೆ ತೆರಳಿದ ಮೊಕ್ತೇಸರರಿಗೆ ತೀವ್ರ ಅಸೌಖ್ಯವಾಗಿ ಕೊನೆಗೆ ಶಿವರಾಯ ದೈವದ ದರ್ಶನ ಮಾಡಿ ಕೇಳಿದಾಗ ಗರೋಡಿ ಸ್ಥಾಪನೆ ಮಾಡಬೇಕೆಂದು ಅಪ್ಪಣೆಯಾಯಿತಂತೆ. ಆ ಪ್ರಕಾರ ಪುನ: ಗೋಳಿಗರೋಡಿಗೆ ಹೋಗಿ ಅಲ್ಲಿಂದ ಸ್ವಲ್ಪ ಮಣ್ಣನ್ನು ತಂದು ಪಂಜುರ್ಲಿ, ನಾಗಬ್ರಹ್ಮ ಹಾಗೂ ಬೈದೇರುಗಳನ್ನು ಇಲ್ಲಿ ನೆಲೆಗೊಳಿಸಲಾಯಿತಂತೆ.
ಗರೋಡಿಗೆ ಉತ್ತರಾಭಿಮುಖವಾದ ಒಂದು ದ್ವಾರವಿದ್ದು ಬ್ರಹ್ಮಗುಡಿಯು ಪೂರ್ವಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿ ಹಾಗೂ ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಪೂಜೆ ನಡೆಯುತ್ತದೆ.
ಗುಂಡದ ಬಲಭಾಗದಲ್ಲಿ ಇಬ್ಬರು ಬಲ್ಲಾಳರ ಮಣೆಮಂಚ, ಪಕ್ಕದಲ್ಲಿ ಕೋಟಿಚೆನ್ನಯರ ಹಾಗೂ ಕುಜುಂಬ ಕಾಂಜವರ ಮಣೆಮಂಚಗಳಿವೆ. ಗುಂಡದ ಹಿಂಭಾಗದಲ್ಲಿ ದೇಯಿ ಬೈದೆತಿಯ ಮಣೆಮಂಚಗಳಿವೆ.
ಗುಂಡದ ಎಡಭಾಗದಲ್ಲಿ ಪರಿವಾರ ದೈವಗಳ ಮಣೆಂಚಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಚೌಂಡಿ, ಮೈಂದಾಳ್ತಿ ಮಣೆಮಂಚಗಳಿವೆ. ಪಕ್ಕದಲ್ಲಿ ಪಂಜುರ್ಲಿ ದೈವದ ಗದ್ದಿಗೆ ಇದೆ.
ಬ್ರಹ್ಮಗುಡಿಯ ಎದುರಿಗೆ ಜೋಗಿಪುರುಷ ಮರದ ಮೂರ್ತಿ ಇದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯನ ಮೂರ್ತಿ ಇದೆ.
ಗರೋಡಿಯ ಹೊರಗೆ ಗುಡಿಯಲ್ಲಿ ಶಿವರಾಯ ದೈವದ ಮರದ ಮೂರ್ತಿ ಇದೆ.
ಗರೋಡಿಯ ಆವರಣದೊಳಗೆ ತುಳಸಿ ಕಟ್ಟೆ, ಬಲಿಕಲ್ಲುಗಳಿವೆ.
ಕೃಷ್ಣ ಪೂಜಾರಿ
2010ರಿಂದ ಕೃಷ್ಣ ಪೂಜಾರಿಯವರು (48 ವರ್ಷ) ಗರೋಡಿಯ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಇವರ ಹಿರಿಯರಾದ ಗೋವಿಂದ ಪೂಜಾರಿ, ಕಾಳಪೂಜಾರಿಯವರು ಈ ಸೇವೆ ಮಾಡಿದ್ದರು. ಗರೋಡಿಯಲ್ಲಿ ಬೈದ್ಯರ ದರ್ಶನ ಪಾತ್ರಿಗಳಿಲ್ಲ.
ಶಂಕರ ಶೆಟ್ಟಿ (ಬಚ್ಚು ಶೆಟ್ಟಿ) ಇವರು ಈ ಗರೋಡಿಯ ಮೊಕ್ತೇಸರರಾಗಿದ್ದಾರೆ. ಇವರ ಮೊದಲು ಆನಂದ ಶೆಟ್ಟಿಯವರು ಇಲ್ಲಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಹಗಲು ಪನಿಯಾರ, ಕದಿರು ಕಟ್ಟುವುದು, ಡಿಸೆಂಬರ್ ತಿಂಗಳಲ್ಲಿ ಕಾಯ್ದ ಪೂಜೆ, ದರ್ಶನ ಸೇವೆ, ಏಪ್ರಿಲ್ ತಿಂಗಳ 11ನೇ ತಾಖಿನಂದು ಗೆಂಡದ ಹಬ್ಬಗಳು ನಡೆಯುತ್ತವೆ.
ಶೀರೂರು ಮುದ್ದುಮನೆ, ಹೊರಲಾಳಿ, ನೆಂಚಾರ್, ಮಡಾಮಕ್ಕಿ ಊರುಗಳ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಾಗಿದ್ದು, ಮುದುವೆ ಮುಂತಾದ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
08-03-2002ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದ್ದು, ಈಗ ಪುನ: ಜೀರ್ಣೋದ್ಧಾರದ ಯೋಜನೆಯಿದೆ.
ದಿನೇಶ ಮಡಿವಾಳ ಮುದ್ದುಮನೆ ಇವರು ಮಡಿವಾಳರಾಗಿ, ರಾಜು ದೇವಾಡಿಗ ಶೀರೂರು ಇವರು ವಾದ್ಯದವರಾಗಿ, ಕರಿಯ ಮಿಯಾರು ಇವರು ಡೋಲಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಯ ವಿಳಾಸ:
ಸಪರಿವಾರ ಶ್ರೀ ಅರ್ಭಕ ಧಾರೇಶ್ವರೀ ಸಹಿತ ಶ್ರೀ ಬ್ರಹ್ಮಬೈದರ್ಕಳ ಗರೋಡಿ, ನಾಯರಬೆಟ್ಟು,
ಶೀರೂರು ಮುದ್ದುಮನೆ,
ಬ್ರಹ್ಮಾವರ ತಾಲೂಕು – 576223.
ಶೀರೂರು ಮುದ್ದುಮನೆ,
ಬ್ರಹ್ಮಾವರ ತಾಲೂಕು – 576223.
ಗರೋಡಿಯ ಅರ್ಚಕರು:
ಕೃಷ್ಣ ಪೂಜಾರಿ – 8105460500
ಮಾಹಿತಿ ನೀಡಿದವರು :
ಕೃಷ್ಣ ಪೂಜಾರಿ
ಮಾಹಿತಿ ಸಂಗ್ರಹಿಸಿದ ದಿನಾಂಕ :
02.01.2025