Baidashree

Sri Bantara Kotichennaiyya Garodi and Panjurli and Mari Shivaraya Temple Kaipadi – Vaderahobali

ಶ್ರೀ ಬಂಟರ ಕೋಟಿಚೆನ್ನಯ್ಯ ಗರೋಡಿ ಹಾಗೂ ಪಂಜುರ್ಲಿ ಮತ್ತು ಮಾರಿ ಶಿವರಾಯ ದೇವಸ್ಥಾನ ಕೈಪಾಡಿ – ವಡೇರಹೋಬಳಿ

ಉಡುಪಿಯಿಂದ ಸಾಲಿಗ್ರಾಮ – ಕೋಟೇಶ್ವರ ನಂತರ ಕುಂದಾಪುರಕ್ಕೆ ಮೊದಲು ಟಿ.ಟಿ. ರೋಡ್ ನಲ್ಲಿ ಎಡಕ್ಕೆ ತಿರುಗಿ ಸುಮಾರು ಒಂದು ಕಿ.ಮೀ. ಒಳಗೆ ಸಾಗಿದರೆ ಈ ಗರೋಡಿ ಸಿಗುತ್ತದೆ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದೆ. ಬ್ರಹ್ಮಗುಡಿಯು ಉತ್ತರಾಬಿಮುಖವಾಗಿದೆ.
ಬ್ರಹ್ಮಗುಂಡವನ್ನು ಗ್ರಾನೈಟ್ ಹಾಕಿ ನಿರ್ಮಿಸಲಾಗಿದೆ. ಗರೋಡಿಯ ಬ್ರಹ್ಮಗುಡಿಯಲ್ಲಿ ಒಳಗೆ ಗುಂಡದ ಎದುರಿನಲ್ಲಿ ನಾಗಬ್ರಹ್ಮರ ಕುದುರೆ ಮಾತ್ರವಿರುವ ಪಂಚಲೋಹದ ಮೂರ್ತಿ ಇದೆ. ಬ್ರಹ್ಮಗುಂಡದ ಒಳಗೆ ವಿಷ್ಣುಮೂರ್ತಿ ದೇವರ ಪಂಚಲೋಹದ ಮೂರ್ತಿ ಇದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಸುಮಾರು 250 – 300 ವರ್ಷಗಳ ಹಿಂದೆ ಗರೋಡಿ ಮನೆಯ ಎರಡು ಸಂಸಾರದೊಳಗೆ ಜಗಳವಾಗಿ ಒಂದು ಕಡೆಯವರು ರಾತ್ರಿ ನಾಗಬ್ರಹ್ಮರ ಮೂರ್ತಿ (ಕುದುರೆಯನ್ನು ಬಿಟ್ಟು) ಹಾಗೂ ಘಂಟಾಮಣಿಯನ್ನು ತೆಗೆದುಕೊಂಡು ಹೋಗಿ ಈ ಗರೋಡಿಯಿಂದ ಸುಮಾರು 200ಮೀ. ದೂರದಲ್ಲಿ ಇನ್ನೊಂದು ಗರೋಡಿಯನ್ನು ನಿರ್ಮಿಸಿ ಪೂಜೆ ಮಾಡಲಾರಂಭಿಸಿದರಂತೆ. ಹಾಗಾಗಿ ಈ ಗರೋಡಿಯಲ್ಲಿ ನಾಗಬ್ರಹ್ಮರ ಕುದುರೆ ಮಾತ್ರ ಉಳಿದುಕೊಂಡಿದೆ. ಇತ್ತೀಚೆಗೆ ಈ ಗರೋಡಿಯಲ್ಲಿ ನಾಗಬ್ರಹ್ಮರ ಹೊಸ ಮೂರ್ತಿ ಮಾಡಿಸುವುದೆಂದು ನಿರ್ಣಯಿಸಿ ದರ್ಶನ ಮಾಡಿಸಿ ಕೇಳಿದಾಗ ಹೊಸ ಮೂರ್ತಿ ಮಾಡುವುದು ಬೇಡವೆಂದೂ, ಹಳೆಯದನ್ನು ವಾಪಾಸು ತರಿಸುವುದಾಗಿ ಬೈದೇರುಗಳ ಅಪ್ಪಣೆಯಾಯಿತಂತೆ. ಹಾಗಾಗಿ ಹಳೆಯ ಮೂರ್ತಿ ವಾಪಾಸು ಬರುವ ಶುಭಗಳಿಗೆಗಾಗಿ ಭಕ್ತರು ಕಾಯುತ್ತಿದ್ದಾರೆ.
ಬ್ರಹ್ಮಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು ಹಾಗೂ ಮಗುವಿನ ಮರದ ಮೂರ್ತಿ, ದೇಯಿ ಬೈದೆತಿ ಮಣೆಮಂಚವಿದೆ.
ಗುಂಡದ ಬಲಭಾಗದಲ್ಲಿ ಶಿವಲಿಂಗದ ಕಲ್ಲಿನ ಕೆತ್ತನೆ, ಬಂಟ ಮತ್ತು ಚಿಟಕರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಪಂಜುರ್ಲಿ ದೈವದ ಗದ್ದಿಗೆಯಲ್ಲಿ ಮರದ ಮೂರ್ತಿ, ಇನ್ನೊಂದು ಗದ್ದಿಗೆಯಲ್ಲಿ ಹಪ್ಪಿನ ಕೆರೆ ಹೈಗುಳಿ ದೈವದ ಮರದ ಮೂರ್ತಿಗಳಿವೆ. ಬ್ರಹ್ಮಗುಡಿಯ ಎಡಭಾಗದಲ್ಲಿ ನಂದಿಕೇಶ್ವರ, ಮೂಡುರ ಹೈಗುಳಿ, ಗೆಂಡದ ಹೈಗುಳಿ ದೈವಗಳ ಗದ್ದಿಗೆಯಲ್ಲಿ ಮರದ ಮೂರ್ತಿಗಳಿವೆ.
ಪಕ್ಕದಲ್ಲಿ ಧೂಮಾವತಿ, ಬಾಲಯ್ಯ, ಮೈಂದಾಳ್ತಿ, ಹಳಿಯಮ್ಮ, ಚಿಕ್ಕು, ಬೊಬ್ಬರ್ಯ ದೈವಗಳ ಮರದ ಮೂರ್ತಿ ಇದೆ.
ಬ್ರಹ್ಮಗುಡಿಯ ಎದುರಿಗೆ ಪಾತ್ರಿ ವೆಂಕಟಯ್ಯ ಪೂಜಾರಿ, ಜೋಗಿಪುರುಷ, ಮಾಸ್ತಿ ಅಮ್ಮನ ಮರದ ಮೂರ್ತಿ ಹಾಗೂ ಗಣಗಳ ಮಣೆಮಂಚವಿದೆ.
ಗರೋಡಿಯ ಬಾಗಿಲ ಹತ್ತಿರ ಜಗುಲಿಯಲ್ಲಿ ಹೊರಸುತ್ತಿನ ಹೈಗುಳಿ ಸಾನಿಧ್ಯವಿದೆ. ಗರೋಡಿಯ ಪರಿಸರದಲ್ಲಿ ಸ್ವಾಮಿ ದೈವದ ಸಾನಿಧ್ಯ ಹಾಗು ನಾಗಬನಗಳಿವೆ.
ಗರೋಡಿಯ ಎದುರಿಗೆ ಮಾರಿ ಶಿವರಾಯ ದೇವಸ್ಥಾನವಿದೆ.
ಗರೋಡಿಯ ಆವರಣದೊಳಗೆ ಕ್ಷೇತ್ರಪಾಲ, ತುಳಸಿಕಟ್ಟೆ, ಬಾವಿ, ಬಲಿ ಕಲ್ಲುಗಳಿವೆ.

ಸಂಜೀವ ಪೂಜಾರಿ

ವಿಶ್ವನಾಥ ಪೂಜಾರಿ

ವಿನೋದ ಪೂಜಾರಿ

ನಾರಾಯಣ ಪೂಜಾರಿ

ಯೋಗೀಶ ಪೂಜಾರಿ

ಗರೋಡಿಯ ಅರ್ಚಕರಾಗಿ ಕೈಪಾಡಿ ಮನೆಯವರು ಹಾಗೂ ಪೂಜಾರಿ ಮನೆಯವರು ವರ್ಷಕ್ಕೊಮ್ಮೆ ಬದಲಾವಣೆ ಮಾಡಿಕೊಂಡು ಸೇವೆ ಮಾಡುತ್ತಾರೆ. ಸಂಜೀವ ಪೂಜಾರಿ (65 ವರ್ಷ), ವಿಶ್ವನಾಥ (37 ವರ್ಷ), ವಿನೋದ (34 ವರ್ಷ) ಇವರು ಕೈಪಾಡಿ ಮನೆಯ ಅರ್ಚಕರಾಗಿ, ನಾರಾಯಣ ಪೂಜಾರಿ (65 ವರ್ಷ), ಯೋಗೀಶ ಪೂಜಾರಿ (40 ವರ್ಷ) ಇವರು ಪೂಜಾರಿ ಮನೆಯ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಹಿಂದೆ ಮುತ್ತ ಪೂಜಾರಿ, ಬಾಬು ಪೂಜಾರಿ, ಗಣಪ ಪೂಜಾರಿ, ಮೊದಲಾದ ಹಿರಿಯರು ಇಲ್ಲಿ ಅರ್ಚಕರಾಗಿ ಸೇವೆ ಮಾಡಿದ್ದರು.
ಈಗ ಈ ಗರೋಡಿಯಲ್ಲಿ ದರ್ಶನದ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಗಣಪ ಪೂಜಾರಿ, ವೆಂಕಟ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಗರೋಡಿಯ ಮೊಕ್ತೇಸರರಾಗಿ ಕೂಡಾ ಕೈಪಾಡಿ ಮನೆ ಹಾಗೂ ಪೂಜಾರಿ ಮನೆಯವರು ವರ್ಷಕ್ಕೊಬ್ಬರಂತೆ ಅಧಿಕಾರ ಬದಲಾವಣೆ ಮಾಡಿಕೊಳ್ಳುತ್ತಾರೆ. ಸಂಜೀವ ಪೂಜಾರಿಯವರು ಕೈಪಾಡಿ ಮನೆಯವರು ಮೊಕ್ತೇಸರರಾದರೆ, ವೆಂಕಟ ಪೂಜಾರಿಯವರು ಪೂಜಾರಿ, ಪೂಜಾರಿ ಮನೆಯ ಮೊಕ್ತೇಸರರು.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ ಚೌತಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಕೊಡಿ ತಿಂಗಳಲ್ಲಿ ಅಗೆಲು ಸೇವೆ, ದರ್ಶನ ಸೇವೆ, ಹಾಲು ಹಬ್ಬ, ಫೆಬ್ರವರಿ ತಿಂಗಳ 5ನೇ ತಾರೀಖಿನಂದು ಗೆಂಡ ಸೇವೆ, 6ಕ್ಕೆ ತುಲಾಭಾರ ಸೇವೆ, ಕುರಿಹಾರ ಸೇವೆಗಳು ನಡೆಯುತ್ತದೆ.
ಹಂಗಳೂರು, ಕೋಣಿ, ಕೋಡಿ, ಹೊಸಬೆಟ್ಟು, ವಿಠಲವಾಡಿ, ವಡೇರಹೋಬಳಿ, ಕೋಟೇಶ್ವರ ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರುತ್ತವೆ.
ಈ ಊರ ಜನರು ಗರೋಡಿಯಲ್ಲಿ ತುಲಾಭಾರ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಪರವೂರ ಜನರ, ಹರಕೆ, ಕಾಣಿಕೆ, ಸಹಾಯಧನ,ವರಡ ವಂತಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತಿದೆ.
ಗರೋಡಿಗೆ ಸುಮಾರು ಒಂದೂವರೆ ಎಕ್ರೆ ಜಾಗವಿದೆ. 1972 ಹಾಗೂ 2000 ಇಸವಿಯಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ. ೨೦೦೦ ಇಸವಿಯ ಜೀರ್ಣೋದ್ದಾರದ ಕಾರ್ಯ ಪ್ರಗತಿಯಲ್ಲಿದ್ದಾಗ ನಮ್ಮ ಸಂಸ್ಥೆಯ ಅಧ್ಯಯನ ತಂಡವು ಈ ಗರೋಡಿಗೆ ಭೇಟಿ ಕೊಟ್ಟ ಸಂದರ್ಭದ ವಿಡಿಯೋ ಚಿತ್ರೀಕರಣ ಇಲ್ಲಿದೆ. ಗರೋಡಿಯ ಅಂದಿನ ಅರ್ಚಕರಾಗಿದ್ದ ಮುತ್ತು ಪೂಜಾರಿಯವರು ಜೀರ್ಣೋದ್ದಾರದ ಬಗ್ಗೆ ಮಾಹಿತಿ ನೀಡಿದ್ದರು.
ವಡೇರ ಹೋಬಳಿಯ ಸೀತ ಮಡಿವಾಳರ ಮಗ ಮಡಿವಾಳರಾಗಿ, ಮಂಜುನಾಥ ದೇವಾಡಿಗ ಕೋಟೇಶ್ವರ ವಾಧ್ಯದವರಾಗಿ, ವಿಠಲವಾಡಿಯ ರಂಗ ಡೋಲಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಮೂಲ ಗರೋಡಿಯಿಂದ ವಿವಾದದ ಕಾರಣ ನಾಗಬ್ರಹ್ಮರ ಮೂರ್ತಿ (ಕುದುರೆಯನ್ನು ಬಿಟ್ಟು) ಹಾಗೂ ಘಂಟಾಮಣಿ ತಂದು ಸ್ಥಾಪಿಸಿದ ಗರೋಡಿ ಹತ್ತಿರದಲ್ಲಿದೆ.
ಈ ಗರೋಡಿಯನ್ನು ಶ್ರೀ ಬ್ರಹ್ಮಬೈದರ್ಕಳ ಪಂಜುರ್ಲಿ ಗರೋಡಿ ಕೈಪಾಡಿ ಎಂದು ಹೆಸರಿಸಲಾಗಿದೆ.
ಇದರ ಬ್ರಹ್ಮಗುಡಿಯ ಒಳಗೆ ಸಿಮೆಂಟಿನಿಂದ ನಿರ್ಮಿಸಿ ಟೈಲ್ಸ್ ಹಾಕಲಾದ ಗುಂಡದಂತಿರುವ ಮಂಟಪದಲ್ಲಿ ನಾಗಬ್ರಹ್ಮರ ಮೂರ್ತಿ ಇದೆ. ಕುದುರೆಯ ಬದಲಿಗೆ ಕಂಚಿನಿಂದ ನಿರ್ಮಿಸಿದ ಪೀಠದ ಮೇಲೆ ಮೂರ್ತಿಯನ್ನಿಡಲಾಗಿದೆ.
ಬ್ರಹ್ಮಗುಡಿಯ ಹೊರಗೆ ಪಂಜುರ್ಲಿ, ಗೆಂಡದ ಹೈಗುಳಿ, ಮಾರಿ ಶಿವರಾಯ, ಮಾಸ್ತಿಯಮ್ಮ ದೈವಗಳ ಮರದ ಮೂರ್ತಿ, ಶ್ರೀ ಮರ್ಲುಚಿಕ್ಕು ಹಾಗೂ ಪರಿವಾರ ದೈವಗಳ ಮಣೆಮಂಚವಿದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಹೊರಸುತ್ತಿನ ಹೈಗುಳಿ, ಹೊರಾಂಗಣದಲ್ಲಿ ತುಳಸಿ ಕಟ್ಟೆಗಳಿವೆ.

ಗರೋಡಿಯ ವಿಳಾಸ:

ಶ್ರೀ ಬಂಟರ ಕೋಟಿಚೆನ್ನಯರ ಗರೋಡಿ ಹಾಗೂ ಪಂಜುರ್ಲಿ ಮತ್ತು ಮಾರಿ ಶಿವರಾಯ ದೇವಸ್ಥಾನ,
ಕೈಪಾಡಿ, ಟ.ಟ.ರಸ್ತೆ, ವಡೇರಹೋಬಳಿ, ಕುಂದಾಪುರ – 576201.

ಅರ್ಚಕರು:

ಕೈಪಾಡಿ ಮನೆ ವಿಶ್ವನಾಥ ಪೂಜಾರಿ – 8105669153
ಕೈಪಾಡಿ ಮನೆ ವಿನೋದ ಪೂಜಾರಿ – 8971427022,
ಪೂಜಾರಿ ಮನೆ ಯೋಗೀಶ ಪೂಜಾರಿ – 9164954574.

ಮಾಹಿತಿ ನೀಡಿದವರು :

ಕೈಪಾಡಿ ಮನೆ ವಿನೋದ ಪೂಜಾರಿ,
ನಾರಾಯಣ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.01.2025