Baidashree

Shree Brahma Baidarkala Garodi, Ulloor 74

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಉಳ್ಳೂರು 74

ಶ್ರೀ ಬ್ರಹ್ಮಬೈಕರ್ದಳ ಗರೋಡಿ ಉಳ್ಳೂರು 74, ಈ ಗರೋಡಿಯು ಉಡುಪಿಯಿಂದ – ಬ್ರಹ್ಮಾವರ – ಬಾರ್ಕೂರು – ಎಡ್ತಾಡಿ – ಸೈಬ್ರಕಟ್ಟೆ – ಬಿದ್ಕಲ್ ಕಟ್ಟೆ – ಹಾಲಾಡಿ ಬಸ್ಸು ನಿಲ್ದಾಣದ ಹತ್ತಿರ ಕುಂದಾಪುರ – ಆಗುಂಬೆ ರಾಜ್ಯ ಹೆದ್ದಾರಿಯಲ್ಲಿ ಸುಮಾರು ನಾಲ್ಕು ಕಿ. ಮೀ. ಸಾಗಿದ ನಂತರ ಬಲಕ್ಕೆ ತಿರುಗಿ 6 ಕಿ. ಮೀ. ದೂರದಲ್ಲಿದೆ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಗುಂಡದ ಒಳಗೆ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು, ಬಲ್ಲಾಳರು ಹಾಗೂ ಮೂವರು ಮಕ್ಕಳ ಮರದ ಮೂರ್ತಿಯಿದೆ.
ಗುಂಡದ ಬಲಭಾಗದಲ್ಲಿ ದೇಯಿಬೈದೆತಿ ಹಾಗೂ ಪರಿವಾರ ದೈವಗಳ ನಾಲ್ಕು ಮುಂಡಿಗೆಯಿದೆ.
ಬ್ರಹ್ಮಗುಡಿಯ ಎಡಭಾಗದಲ್ಲಿ ಪಂಜುರ್ಲಿ ದೈವದ ಮುಂಡಿಗೆ, ಮೈಂದಾಳ್ತಿ ಹಾಗೂ ಮಗುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎದುರಿಗೆ ಜೋಗಿಪುರುಷರ ಮರದ ಮೂರ್ತಿ ಹಾಗೂ ಮುಂಡಿಗೆಯಿದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ ಹಾಗೂ ಮೋಟುಕಾಲು ಬೊಬ್ಬರ್ಯ ದೈವಗಳ ಮಂಡಿಗೆಯಿದೆ.
ಗರೋಡಿಯ ಬಾಗಿಲ ಹತ್ತಿರ ಜಗುಲಿಯಲ್ಲಿ ಹೊರಸುತ್ತಿನ ಹೈಗುಳಿ ಸಾನಿಧ್ಯವಿದೆ. ಗರೋಡಿಯ ಪರಿಸರದಲ್ಲಿ ಸ್ವಾಮಿ ದೈವದ ಸಾನಿಧ್ಯ ಹಾಗು ನಾಗಬನಗಳಿವೆ.
ಗರೋಡಿಯ ಎದುರಿನ ಶ್ರೀ ಮಾರಿ ಶಿವರಾಯ ಗುಡಿಯಲ್ಲಿ ಶಿವರಾಯ ಹಾಗೂ ಹುಲಿಚಾಮುಂಡಿ ದೈವಗಳ ಮರದ ಮೂರ್ತಿಯಿದೆ. ಗುಡಿಯ ಬಾಗಿಲ ಎರಡು ಬದಿಯಲ್ಲಿ ಮಂತ್ರಿಗಣ ಹಾಗೂ ಕ್ಷೇತ್ರಪಾಲ ದೈವಗಳ ಮುಂಡಿಗೆಗಳಿವೆ.
ಗರೋಡಿಯ ಎದುರಿಗೆ ಮಾರಿ ಶಿವರಾಯ ದೇವಸ್ಥಾನವಿದೆ.
ಗರೋಡಿಯ ಆವರಣದಲ್ಲಿ ತುಳಸೀಕಟ್ಟೆ, ಬಲಿ ಕಲ್ಲುಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗ ಬನವಿದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಹೊರಸುತ್ತಿನ ಹೈಗುಳಿ, ಹೊರಾಂಗಣದಲ್ಲಿ ತುಳಸಿ ಕಟ್ಟೆಗಳಿವೆ.

ಶ್ರೀಕಾಂತ ಪೂಜಾರಿ

ಶ್ರೀಕಾಂತ ಪೂಜಾರಿ(35 ವರ್ಷ) ಇವರು ಗರೋಡಿಯ ಅರ್ಚಕರಾಗಿದ್ದಾರೆ. ಇವರ ಮೊದಲು ಮುತ್ತ ಪೂಜಾರಿ, ಕೋಟಿ ಪೂಜಾರಿಯವರು ಇಲ್ಲಿಯ ಅರ್ಚಕರಾಗಿ ಸೇವೆ ಮಾಡಿದ್ದರು.

ಕೃಷ್ಣ ಪೂಜಾರಿ

ಕೃಷ್ಣ ಪೂಜಾರಿ (53 ವರ್ಷ), ಪ್ರಕಾಶ ಪೂಜಾರಿ, ಉಮೇಶ ಪೂಜಾರಿ ಇವರು ಇಲ್ಲಿಯ ದರ್ಶನ ಸ್ಥಳ ಪಾತ್ರಿಗಳು. ಇವರ ಮೊದಲು ರಘು ಪೂಜಾರಿ, ನಾರಾಯಣ ಪೂಜಾರಿ, ರಾಜು ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಸಂಜೀವ ಶೆಟ್ಟಿಯವರು ಗರೋಡಿಯ ಮೊಕ್ತೇಸರರು. ಸುಧಾಕರ ಶೆಟ್ಟಿಯವರು ಮುಕ್ಕಾಲಿ ಶೆಟ್ಟಿಯಾಗಿದ್ದಾರೆ. ನಾರಾಯಣ ಹೆಬ್ಬಾರರು, ಸಂಜೀವ ಶೆಟ್ಟಿಯವರ ಮೊದಲು ಈ ಗರೋಡಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜದ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹಗಲು ಪನಿವಾರ, ಕದಿರು ಕಟ್ಟುವುದು, ಏಪ್ರಿಲ್ ತಿಂಗಳಲ್ಲಿ ಅಗೆಲು ಸೇವೆ, ದರ್ಶನ, ತುಲಾಭಾರ ಸೇವೆ, ಮರುದಿನ ಬೈದರ್ಕಳ ನೇಮ, ಜೋಗಿಪುರುಷ, ಮೈಂದಾಳ್ತಿ ಕೋಲ ನಡೆದು ಮರುದಿನ ಶಿವರಾಯ ಕೋಲ ನಡೆಯುತ್ತದೆ.
ಉಳ್ಳೂರು, ಸಿದ್ದಾಪುರ, ಶಂಕರನಾರಾಯಣ, ಹೊಸಂಗಡಿ ಗ್ರಾಮಗಳು ಈ ಕೂಡು ಕಟ್ಟಿಗೆ ಸೇರಿವೆ. ಕೂಡುಕಟ್ಟಿನ ಜನರು ಗರೋಡಿಯಲ್ಲಿ ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಗರೋಡಿಯು ಐವತ್ತು ಸೆಂಟ್ಸ ಸರ್ಕಾರಿ ಜಾಗದಲ್ಲಿದೆ. ಭಕ್ತಾದಿಗಳು ನೀಡುವ ಕಾಣಿಕೆ, ಬತ್ತ, ಅಡಿಕೆ, ಇವುಗಳಿಂದ ಬರುವ ಆದಾಯದಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತದೆ.
ಶೇಖರ ಪರವ ಚೇರ್ಕಾಡಿ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ, ಭುಜಂಗ ಮಡಿವಾಳ ಉಳ್ಳೂರು ಇವರು ಮಡಿವಾಳರಾಗಿ, ಬಸವ ಉಳ್ಳೂರು ಇವರು ಡೋಲಿನವರಾಗಿ ಸೇವೆ ಮಾಡುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು ಗರೋಡಿಯ ಪರಿಸರದಲ್ಲಿ ಉಳ್ಳೂರು ಬಿಲ್ಲವ ಸಂಘ ಚಟುವಟಿಕೆಯಲ್ಲಿದೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಉಳ್ಳೂರು 74,
ಅಂಚೆ ಉಳ್ಳೂರು 74,
ಕುಂದಾಪುರ ತಾಲೂಕು,
ಉಡುಪಿ ಜಿಲ್ಲೆ – 576224.

ಅರ್ಚಕರು:

ಶ್ರೀಕಾಂತ ಪೂಜಾರಿ – 9741150068

ಮಾಹಿತಿ ನೀಡಿದವರು :

ಕೃಷ್ಣ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

16.01.2025